ಮಂಗಳೂರು: ಜೈಲಿನಿಂದ ಕೋರ್ಟಿಗೆ ವಿಚಾರಣೆಗೆಂದು ಕರೆತಂದಿದ್ದ ಕೈದಿಯೊಬ್ಬ ತನ್ನನ್ನು ಹಿಡಿದುಕೊಂಡಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೂಲತಃ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿಯಾಗಿದ್ದ ನುಮಾನ್ ಎಂಬ ಆರೋಪಿ ಪೊಲೀಸ್ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಜೈಲಿನಲ್ಲಿದ್ದ ನುಮಾನ್ ನನ್ನು ಕುರಿಯಾಕೋಸ್ ಎಂಬ ಮೀಸಲು ಪಡೆಯ ಪೇದೆ ಕೋರ್ಟ್ ಗೆ ಹಾಜರುಪಡಿಸಲು ಕರೆದುಕೊಂಡು ಬಂದಿದ್ದರು.
ಕೋರ್ಟ್ ನಲ್ಲಿ ವಿಚಾರಣೆ ಪೂರ್ಣವಾದ ನಂತರ ಜೈಲಿಗೆ ಹಿಂದಿರುಗುವ ಸಮಯದಲ್ಲಿ ಆರೋಪಿ ನುಮಾನ್ ತನಗೆ ಹಾಕಿದ್ದ ಕೈ ಕೋಳಗಳಿಂದಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಪೊಲೀಸ್ ಹಾಗೂ ಪೇದೆಯ ನಡುವಿನ ಜಟಾಪಟಿ ಏರ್ಪಟ್ಟಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಟ್ರಾಫಿಕ್ ಪೊಲೀಸ್ ಪೇದೆಯ ಸಹಾಯಕ್ಕೆ ಆಗಮಿಸಿದ್ದಾರೆ.
ಬಳಿಕ ಪೊಲೀಸರು ಕೈದಿಯನ್ನು ಜೀಪಿನ ಮೂಲಕ ಜೈಲಿಗೆ ಕರೆದ್ಯೊಯ್ದಿದ್ದು, ಘಟನೆ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಕೈದಿ ನುಮಾನ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.