ಚಿಕ್ಕಬಳ್ಳಾಪುರ: ಬಂಧಿಸಲು ಹೋಗಿದ್ದ ಪೇದೆಯೊಬ್ಬರಿಗೆ ಆರೋಪಿ ಕಪಾಳ ಮೋಕ್ಷ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೀರ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೀರ್ಜೇನಹಳ್ಳಿ ಗ್ರಾಮದ ಎನ್.ಮೂರ್ತಿ ನಂದಗುಡಿ ಪೊಲೀಸ್ ಠಾಣೆಯ ಪೇದೆ ಶಿವಲಿಂಗಯ್ಯ ಅವರ ಕಪಾಳಕ್ಕೆ ಹೊಡೆದಿದ್ದಾನೆ.
ವಂಚನೆ ಆರೋಪದಡಿ ಎನ್.ಮೂರ್ತಿ ವಿರುದ್ಧ ಹೊಸಕೋಟೆ ತಾಲೂಕಿನ ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಆರೋಪಿಯನ್ನು ಬಂಧಿಸಲು ದಫೇದಾರ್ ಶಿವಲಿಂಗಯ್ಯ ಅವರು ಬೀರ್ಜೇನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಬಂಧನವನ್ನು ವಿರೋಧಿಸಿದ ಎನ್.ಮೂತಿ ಶಿವಲಿಂಗಯ್ಯ ಅವರ ಮೇಲೆ ಹಲ್ಲೆ ಮಾಡಿದ್ದಾನೆ.
ಶಿವಲಿಂಗಯ್ಯ ಅವರು ಕೊನೆಗೂ ಆರೋಪಿಯನ್ನು ಬಂಧಿಸಿ ನಂದಗುಡಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಎನ್.ಮೂರ್ತಿ ವಿರುದ್ಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.