ಬೆಂಗಳೂರು: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಅಧಿಕಾರಿಗೆ ಆರೋಪಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಜೆಬಿ ನಗರದಲ್ಲಿ ತಡರಾತ್ರಿ ನಡೆದಿದೆ.
ರಾಜಸ್ತಾನ ಮೂಲದ ವ್ಯಕ್ತಿ ಜೀವನ್ ಭೀಮಾನಗರ ಟ್ರಾಫಿಕ್ ಸಹಾಯಕ ನಿರೀಕ್ಷಕ (ಎಎಸ್ಐ) ಶಿವಪ್ಪ ಅವರಿಗೆ ಕಪಾಳಮೋಕ್ಷ ಮಾಡಿದ್ದು, ಆರೋಪಿಯನ್ನು ಕೇಶವ್ ಗುಪ್ತಾ ಎಂದು ಗುರುತಿಸಲಾಗಿದೆ.
ಆರೋಪಿ ಕೇಶವ್ ಗುಪ್ತಾ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಜೆಬಿ ನಗರದಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳದಿಂದ ಪರಾರಿಯಾಗಲು ಕೇಶವ್ ಯತ್ನಿಸಿದ್ದು, ಆ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಅಲ್ಲದೇ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಬರುವಂತೆ ಸೂಚಿಸಿದ್ದಾರೆ.
ಈ ಹಂತದಲ್ಲಿ ಪೊಲೀಸರ ವಿರುದ್ಧವೇ ತಿರುಗು ಬಿದ್ದ ಆರೋಪಿ ಕೇಶವ್ ನಾನು ರಾಜಸ್ಥಾನಿ ಎಂದು ನನ್ನ ಮೇಲೆ ಕೇಸ್ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಎಎಸ್ಐಗೆ ಕಾಪಾಳಮೋಕ್ಷ ಮಾಡಿದ್ದಾನೆ. ಅಲ್ಲದೇ ಮಹಿಳಾ ಪಿಎಸ್ಐ ವಿದ್ಯಾ ಅವರೊಂದಿಗೂ ಆರೋಪಿ ಅನುಚಿತ ವರ್ತನೆ ತೋರಿದ್ದಾನೆ. ಘಟನೆಯ ಸಂಬಂಧ ನಗರದ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಮತ್ತು ಮಹಿಳಾ ಪಿಎಸ್ಐ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಇಂದಿರಾ ನಗರದ ಪೊಲೀಸರು ಬಂಧಿಸಿದ್ದಾರೆ.