ತುಮಕೂರು: ಕೇವಲ 5 ಸಾವಿರ ರೂ. ಹಣಕ್ಕಾಗಿ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 29ರ ರಾತ್ರಿ ತುಮಕೂರು ನಗರದ ಹೊರವಲಯದ ಮಾರನಾಯಕನ ಪಾಳ್ಯದಲ್ಲಿ ತಮ್ಮ ಸ್ನೇಹಿತನನ್ನೇ ಕೊಲೆ ಮಾಡಿದ ಕಿರಾತಕರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ. ಭರತ್ ಹಾಗೂ ಕಾಂತರಾಜು ಬಂಧಿತ ಆರೋಪಿಗಳು. ಇವರಿಬ್ಬರು ತಮ್ಮ ಸ್ನೇಹಿತ ಪಾಲನೇತ್ರಯ್ಯನನ್ನ ಮಚ್ಚಿನಿಂದ ಕೊಲೆ ಮಾಡಿದ್ದರು. ಇದನ್ನೂ ಓದಿ: ಹಣಕ್ಕಾಗಿ ಸ್ನೇಹಿತನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ
ಪಾಲನೇತ್ರಯ್ಯನ ಮನೆಯ ನಾಯಿ ಆರೋಪಿ ಕಾಂತರಾಜುಗೆ ಕಚ್ಚಿತ್ತು. ಆಗ ಆರೋಪಿಗಳಾದ ಕಾಂತರಾಜು ಹಾಗೂ ಭರತ್ ಪಾಲನೇತ್ರಯ್ಯನ ತಾಯಿಯನ್ನು ಪ್ರಶ್ನಿಸಿದ್ದರು. ಈ ಜಗಳ ನಿಧಾನವಾಗಿ ತಾರಕ್ಕಕೇರಿದ್ದು, ಮಧ್ಯ ಪ್ರವೇಶಿಸಿದ ಪಾಲನೇತ್ರಯ್ಯ ಇಬ್ಬರು ಸ್ನೇಹಿತರನ್ನು ತರಾಟೆ ತೆಗೆದುಕೊಂಡಿದ್ದನು.
ಇದರಿಂದ ಕೋಪಗೊಂಡಿದ್ದ ಭರತ್ ಹಾಗೂ ಕಾಂತರಾಜು ಪಾಲನೇತ್ರಯ್ಯನ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು. ಈ ನಡುವೆ ಪಾಲನೇತ್ರಯ್ಯ ಭರತನಿಂದ 5 ಸಾವಿರ ರೂ. ಸಾಲ ಪಡೆದಿದ್ದನು. ಸಾಲ ವಾಪಸ್ ಕೊಡುವಂತೆ ಭರತ್ ಕೇಳಿದ್ದಾಗ ಪಾಲನೇತ್ರಯ್ಯ ಹಣ ಕೊಡಲು ಸತಾಯಿಸುತ್ತಿದ್ದನು. ಘಟನೆ ನಡೆದಿದ್ದ ದಿನ ರಾತ್ರಿ ಬಸ್ ನಿಲ್ದಾಣದ ಬಳಿ ಪಾಲನೇತ್ರಯ್ಯನನ್ನು ಕರೆದು, ದುಡ್ಡು ವಾಪಸ್ ಕೊಡುವಂತೆ ಆರೋಪಿಗಳು ಧಮ್ಕಿ ಹಾಕಿದ್ದರು. ಈ ವೇಳೆ ಪಾಲನೇತ್ರಯ್ಯ ಎರಡು ದಿನ ಸಮಯ ಕೊಡಿ ಹಣ ನೀಡುತ್ತೇನೆ ಎಂದಿದ್ದನು. ಆದರೂ ಇಬ್ಬರು ಆರೋಪಿಗಳು ಸೇರಿ ಪಾಲನೇತ್ರನನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.