ಮೈಸೂರು: ಜಿಲ್ಲೆಯ ನಂಜನಗೂಡಿನಲ್ಲಿ ಆರು ತಿಂಗಳ ಹಿಂದೆ ನಡೆದಿದ್ದ ಹಿಂದಿ ಶಿಕ್ಷಕಿ ಕೊಲೆ ರಹಸ್ಯ ಬೇಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.
ನಂಜನಗೂಡು ನಗರಸಭೆ ಸದಸ್ಯೆ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿಯೊಂದಿಗೆ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತಿದ್ದ ನಗರಸಭೆ ಸದಸ್ಯೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 5 ನೇ ವಾರ್ಡಿನಿಂದ ನಗರಸಭೆಗೆ ಆಯ್ಕೆಯಾದ ಸದಸ್ಯೆ ಗಾಯಿತ್ರಿ ಪ್ರಮುಖ ಆರೋಪಿ. ಆರೋಪಿಗೆ ಸಹಕರಿಸಿದ ಭಾಗ್ಯ,ನಾಗಮ್ಮ ಮತ್ತು ಕುಮಾರ್ ನನ್ನು ಬಂಧಿಸಲಾಗಿದೆ.
ಮಾರ್ಚ್ 9 ರಂದು ಹಿಂದಿ ಶಿಕ್ಷಕಿ ಸುಲೋಚನಾ ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ತನಿಖೆ ನಡೆಸಿದ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ರು. ಬಂಧಿತ ಗಾಯಿತ್ರಿ ಪತಿ ಮುರುಗೇಶ್ ಹಾಗೂ ಶಿಕ್ಷಕಿ ಸುಲೋಚನಾ ನಡುವೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ. ಶ್ರೀಕಂಠೇಶ್ವರನ ದೇವಾಲಯದಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಮುರುಗೇಶ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ
ಸುಲೋಚನಾ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ವಿಚಾರದಲ್ಲಿ ಮುರುಗೇಶ್ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆಗಿತ್ತು. ತನ್ನ ಕುಟುಂಬದ ಸಂತೋಷಕ್ಕೆ ಅಡ್ಡಿಯಾದ ಸುಲೋಚನಾಳನ್ನ ಮುಗಿಸಲು ಸ್ಕೆಚ್ ಹಾಕಿದ ಗಾಯಿತ್ರಿ ತನ್ನ ಸಂಬಂಧಿಕರಾದ ಭಾಗ್ಯ, ನಾಗಮ್ಮ ಹಾಗೂ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.