ಮೈಸೂರು: ಸರಕು ಸಾಗಣೆ ವಾಹನ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ. ತಾಲೂಕಿನ ಯಶವಂತಪುರದ ಹೆಡಿಯಾಲ ಸಮೀಪದಲ್ಲಿ ನಡೆದಿದೆ.
ಯಶವಂತಪುರ ಗ್ರಾಮದ ಆದಿವಾಸಿ ಕೂಲಿ ಕಾರ್ಮಿಕರಾದ ದೇವಯ್ಯ (50) ಮತ್ತು ಕೂಸಮ್ಮ (35 ) ಮೃತ ದುರ್ದೈವಿಗಳು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಹೀಂದ್ರ ವಾಹನದಲ್ಲಿ ಸುಮಾರು 30ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನ ಕರೆದುಕೊಂಡು ಯಶವಂತಪುರದಿಂದ ಹೆಚ್.ಡಿ.ಕೋಟೆಗೆ ದಿನ ಕೂಲಿಗಾಗಿ ಹೋಗುತ್ತಿತ್ತು. ಆದರೆ ಯಶವಂತಪುರದ ಹೆಡಿಯಾಲ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.