ಮಂಡ್ಯ: ಕ್ವಾಲಿಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮಖಾಮುಖಿ ಡಿಕ್ಕಿಯಲ್ಲಿ ಕ್ವಾಲಿಸ್ ನಲ್ಲಿದ್ದ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರೋ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಳವಳ್ಳಿ ತಾಲೂಕಿನ ಬಸವನಪುರ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರ ಹೆಸರು ಪತ್ತೆಯಾಗಿಲ್ಲ. ಉಳಿದಂತೆ ನಾಗರಾಜು, ಆನಂದ, ಪ್ರಭುಲಿಂಗದೇವರು ಎಂಬವರು ಗಾಯಗೊಂಡಿದ್ದಾರೆ. ಕ್ವಾಲಿಸ್ನಲ್ಲಿ ಪ್ರಯಾಣ ಮಾಡ್ತಿದ್ದವರು ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದವರೆಂದು ತಿಳಿದುಬಂದಿದ್ದು, ಜ್ಯೋತಿಷಿಗಳು ಎಂದು ಹೇಳಲಾಗ್ತಿದೆ.
ಇಂದು ಬೆಳಗ್ಗೆ ಕೊಳ್ಳೆಗಾಲದಿಂದ ಕ್ವಾಲಿಸ್ನಲ್ಲಿ ಬೆಂಗಳೂರಿನ ಕಡೆ ತೆರಳುತ್ತಿದ್ದರು. ಇದೇ ವೇಳೆ ಬೆಂಗಳೂರು ಕಡೆಯಿಂದ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಹಾಗೂ ಕ್ವಾಲಿಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನೆಯ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.