ಹುಬ್ಬಳ್ಳಿ: ಅಡುಗೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಮತ್ತು ಟಿಪ್ಪರ್ ನಡುವೆ ಮಾಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೊಂದಾಗಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಹುಬ್ಬಳ್ಳಿಯ ಭಂಡಿವಾಡ ಗ್ರಾಮದ ಬಳಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡು, ಈ ಬೆಂಕಿಯಿಂದ ಲಾರಿಯಲ್ಲಿದ್ದ ಸಿಲಿಂಡರ್ ಗಳು ಒಂದೊಂದಾಗಿ ಸ್ಫೋಟಗೊಂಡಿವೆ. ಪರಿಣಾಮ ಅಕ್ಕಪಕ್ಕದ ಹೊಲದಲ್ಲಿ ಸಿಲಿಂಡರ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೀಗಾಗಿ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ಸವಾರರಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.
300 ಕ್ಕೂ ಹೆಚ್ಚು ಸಿಲಿಂಡರ್ ಪೈಕಿ ಸುಮಾರು 180 ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟಗೊಂಡಿವೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ, ಕೆಲಹೊತ್ತು ಕಾರ್ಯಚರಣೆ ಮಾಡಲು ಆಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲಾಯಿತು. ಇದರಿಂದ ಹುಬ್ಬಳ್ಳಿ- ಗದಗ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಾಹನ ಸವಾರರು ಪರದಾಡುವಂತಹ ಸ್ಥಿತಿಯಿತ್ತು.
ಘಟನೆಯಿಂದ ಲಾರಿ ಮತ್ತು ಟಿಪ್ಪರ್ ಚಾಲಕರು ಹಾಗೂ ಕ್ಲೀನರ್ ಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.