ಚಿಕ್ಕಬಳ್ಳಾಪುರ: ಹೊಸ ವರ್ಷದ ಪಾರ್ಟಿ ಅಮಲಿನಲ್ಲಿ ಕಾರ್ ಹಾಗೂ ಬೈಕ್ ಅಪಘಾತ ಸಂಭವಿಸಿದ್ದು, ರಸ್ತೆ ಮಧ್ಯದಲ್ಲಿಯೇ ವಾಹನಗಳನ್ನು ಬಿಟ್ಟು ಹೋದ ಘಟನೆ ನಂದಿಗಿರಿಧಾಮದ ಕಾರಹಳ್ಳಿ ಕ್ರಾಸ್ ಬಳಿ ನಡೆದಿದೆ.
ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕೆಎ 04 ಎಂಯು 4900 ಸ್ಕೋಡಾ ರ್ಯಾಪಿಟ್ ಕಾರ್ ಹಾಗೂ ಕೆಎ 49 ವಿ 1674 ಪಲ್ಸರ್ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ವಾಹನಗಳನ್ನು ರಸ್ತೆ ಮಧ್ಯದಲ್ಲಿ ಬಿಟ್ಟು ಚಾಲಕ ಹಾಗೂ ಸವಾರ ಪರಾರಿಯಾಗಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ, ಎಡಭಾಗದ ಡೋರ್ ಗೆ ಹೊಡೆತ ಬಿದ್ದಿದೆ.
ನಂದಿಗಿರಿಧಾಮದಲ್ಲಿ ಡಿಸೆಂಬರ್ 31ರಂದು ಸಂಜೆ 4ರಿಂದ ಜನವರಿ 1 ಬೆಳಗ್ಗೆ 8 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಪೊಲೀಸರು ಆದೇಶ ಹೊರಡಿಸಿದ್ದರು. ಹೀಗಾಗಿ ಅಪಘಾತ ಸಂಭವಿಸುತ್ತಿದ್ದಂತೆ ವಾಹನಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪ್ರವಾಸಿಗರ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರದ ಪ್ರಮುಖ ಪ್ರವಾಸಿ ತಾಣಗಳಾದ ನಂದಿಗಿರಿಧಾಮ, ಸ್ಕಂದಗಿರಿ ಬೆಟ್ಟ, ಹಾಗೂ ಆವಲಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv