ಬೆಂಗಳೂರು: ಹೆದ್ದಾರಿ ಅಪಘಾತದಲ್ಲಿ ತುಮಕೂರು ಮೂಲದ ಹರೀಶ್ ದೇಹ ಎರಡು ತುಂಡಾಗಿ ನರಳಾಡಿ ಮೃತ ಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ. ಈ ಘಟನೆ ಕೂಡ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಬಳಿ ನಡೆದಿದೆ.
ವಸಂತ್(28), ರಾಹುಲ್(24)ಗಾಯಗೊಂಡ ಯುವಕರಾಗಿದ್ದು, ಬೈಕ್ ನಲ್ಲಿ ನೆಲಮಂಗಲದ ಮಾದವಾರದ ಬಳಿ ತೆರಳುತ್ತಿದ್ದ ವೇಳೆ ಬೈಕ್ ಗೆ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಅಪಘಾತದ ನಡೆದಿದೆ.
ಈ ವೇಳೆ ಕ್ಯಾಂಟರ್ ವಾಹನದಡಿ ಸಿಲುಕಿದ ಇಬ್ಬರು ಬೈಕ್ ಸವಾರು, ನಾಲ್ಕೈದು ಮೀಟರ್ ದೂರ ಎಳೆದು ಕೊಂಡು ಹೋಗಿದ ಪರಿಣಾಮ ಯುವಕನ ಬಲಗಾಲು ತುಂಡಾಗಿದೆ. ಈ ವೇಳೆ ಆಂಬ್ಯುಲೆನ್ಸ್ ಸಿಗದೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರಿಬ್ಬರು ನರಳಾಡಿದ್ದಾರೆ.
ಗಂಭೀರ ಗಾಯವಾಗಿದ್ದ ಇಬ್ಬರು ಬೈಕ್ ಸವಾರರನ್ನ ಕಂಡ ಸಾರ್ವಜನಿಕರು ನವಯುಗ ಟೋಲ್ ಕಂಪನಿಗೆ ಸೇರಿದ ವಾಹನದೊಂದಿಗೆ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಘಟನೆಯ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ವಾಹನವನ್ನ ವಶಕ್ಕೆ ಪಡೆದಿದ್ದಾರೆ.