ಮಡಿಕೇರಿ: ಮಾಜಿ ಸ್ಪೀಕರ್ ಹಾಗೂ ಕೊಡಗಿನ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ಮನೆಯ ಮೇಲೆ ಎಸಿಬಿ ದಾಳಿ ನಡೆಸುತ್ತೇವೆ ಎಂದು ಬೆದರಿಕೆ ಹಾಕಿ ಹಣ ಕೇಳಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರಿನ ಕೊರಟಗೆರೆ ನಿವಾಸಿ ರೌಡಿ ಶೀಟರ್ ಆನಂದ್ (31) ಬಂಧಿತ ಆರೋಪಿ. ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಮೇಲೆ ಎಸಿಬಿ ದಾಳಿಯಾಗಲಿದ್ದು, ಅದನ್ನು ತಡೆಯಲು ಫೋನ್ ಮೂಲಕ ಹಣದ ಆಮಿಷ ಇಟ್ಟಿದ್ದ ವ್ಯಕ್ತಿಯನ್ನು ಮಡಿಕೇರಿ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕರೆ ಮಾಡಿದ ಸಂಖ್ಯೆಯ ಫೋನ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆಲು ಆಂಧ್ರಪ್ರದೇಶ ಗಡಿಯಲ್ಲಿ ಪತ್ತೆಯಾಗಿದ್ದು, ನಂತರ ರೈಲು ಮೂಲಕ ಬೆಂಗಳೂರು ಕಡೆಗೆ ವಾಪಸ್ಸಾಗುತ್ತಿರುವುದು ತಿಳಿದಿದೆ. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಆನಂದ್ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನಿಮ್ಮ ಮನೆ ಮೇಲೆ ಎಸಿಬಿ ದಾಳಿ ನಡೆಯುತ್ತೆ – ಬೋಪಯ್ಯಗೆ ಕರೆ ಮಾಡಿ ಬೆದರಿಕೆ
ಕೊಡಗಿನ ಕ್ರೈಂ ಬ್ರಾಂಚ್ನ ಸಿದ್ದಾಪುರದ ಎಸ್.ಐ ಮೋಹನ್ ರಾಜ್, ಕಾನ್ಸ್ ಟೇಬಲ್ ವಸಂತ್, ಮಡಿಕೇರಿಯ ನಾಗರಾಜ್, ನಂದಕುಮಾರ್ ನೇತೃತ್ವದ ಆರು ಮಂದಿಯ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಮಡಿಕೇರಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: 1 ಕಿ.ಮೀ ಓಡಿ ಕಳ್ಳನನ್ನು ಹಿಡಿದ ಮಂಗಳೂರು ಪೊಲೀಸ್ ವೀಡಿಯೋ ವೈರಲ್