ಇದೇ ಜೂನ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಮತ್ತು ಅವಿವಾ ಬಿಡಪ್ಪ (Aviva Bidapa) ಅವರ ಮದುವೆ (Marriage) ಸಮಾರಂಭ ನಡೆಯಲಿದೆ. ಈ ಮದುವೆಗೆ ದಕ್ಷಿಣ ಭಾರತದ ಅನೇಕ ಕಲಾವಿದರು ಆಗಮಿಸಲಿದ್ದಾರೆ. ಬಾಲಿವುಡ್ ನಿಂದ ಶತ್ರುಘ್ನ ಸಿನ್ಹಾ ಸೇರಿದಂತೆ ಹಲವರು ಆಗಮಿಸುವ ನಿರೀಕ್ಷೆಯಿದೆ.
ಮೆಗಾಸ್ಟಾರ್ ಚಿರಂಜೀವಿ, ರಜನಿಕಾಂತ್, ಕಮಲ್ ಹಾಸನ್, ಮೋಹನ್ ಬಾಬು, ಖುಷ್ಬೂ, ಸುಹಾಸಿನಿ ಸೇರಿದಂತೆ ಹಲವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದ್ದು, ಇದರಲ್ಲಿ ಅನೇಕರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸ್ಯಾಂಡಲ್ ವುಡ್ ನ ಬಹುತೇಕ ನಟ-ನಟಿಯರು ಹಾಗೂ ತಂತ್ರಜ್ಞರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.
ಕೇವಲ ಚಿತ್ರೋದ್ಯಮದವರು ಮಾತ್ರವಲ್ಲ ರಾಜಕಾರಣಿಗಳು ಕೂಡ ಭಾಗಿಯಾಗಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಹಿಡಿದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಸುಮಲತಾ ಅಂಬರೀಶ್ (Sumalatha) ಅವರು ತಮ್ಮ ಪುತ್ರನ ಮದುವೆಗೆ ಆಹ್ವಾನ ನೀಡಿದ್ದಾರೆ. ಕರ್ನಾಟಕದ ಬಹುತೇಕ ಪ್ರಮುಖ ರಾಜಕೀಯ ಮುಖಂಡರು ಮದುವೆಗೆ ಆಗಮಿಸುವ ಸಾಧ್ಯತೆ ಇದೆ.
ನಿನ್ನೆಯಿಂದಲೇ ಅಂಬರೀಶ್ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಶುರುವಾಗಿದ್ದು, ನಿನ್ನೆ ಮೆಹಂದಿ ಕಾರ್ಯಕ್ರಮ ನಡೆದಿದೆ. ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವಾರುಕಾರ್ಯಕ್ರಮಗಳು ಅಂಬಿ ಮನೆಯಲ್ಲೇ ನೆರವೇರಲಿವೆ. ಜೂನ್ 5ಕ್ಕೆ ಅಭಿಷೇಕ್ ಮತ್ತು ಅವಿವಾ ಹೊಸ ಜೀವನಕ್ಕೆ ಕಾಲಿಟ್ಟರೆ, ಜೂನ್ 7 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.