ಹಲವು ತಿಂಗಳಿನಿಂದ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶದ ಕುರಿತು ಮಾತುಗಳು ಕೇಳಿ ಬರುತ್ತಿವೆ. ತಾಯಿ ಸುಮಲತಾ ಅಂಬರೀಶ್ ಲೋಕಸಭಾ ಸದಸ್ಯರಾಗಿದ್ದರೆ, ಪುತ್ರನನ್ನು ವಿಧಾನಸಭೆಗೆ ಕಳುಹಿಸುವ ಆಸೆಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮೊನ್ನೆಯಷ್ಟೇ ಮಾತನಾಡಿರುವ ಸುಮಲತಾ ಅಂಬರೀಶ್, ‘ಅಭಿಷೇಕ್ ಸಣ್ಣವನಲ್ಲ. ಯಾವಾಗ ರಾಜಕೀಯಕ್ಕೆ ಬರಬೇಕು ಎನ್ನುವುದು ಅವನೇ ಯೋಚಿಸಬೇಕು. ಅಲ್ಲದೇ, ರಾಜಕೀಯಕ್ಕೆ ಬರುವುದು, ಬಿಡುವುದು ಅವನದ್ದೇ ತೀರ್ಮಾನ ಆಗಬೇಕು’ ಎಂದಿದ್ದರು.
ಸುಮಲತಾ ಅಂಬರೀಶ್ ಈ ರೀತಿ ಹೇಳಿಕೆ ನೀಡುತ್ತಿದ್ದಂತೆಯೇ ಅಭಿಷೇಕ್ ವಿಚಾರದಲ್ಲಿ ಮತ್ತಷ್ಟು ಕುತೂಹಲ ಮೂಡಿಸುತ್ತಿದೆ. ಜನರಿಗೆ ತೀರಾ ಹತ್ತಿರವಾಗುವ ನಿಟ್ಟಿನಲ್ಲಿ ಅವರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಮಂಡ್ಯದ ನಾನಾ ಭಾಗಗಳಿಗೆ ಭೇಟಿ ನೀಡಿ, ಜನರೊಂದಿಗೆ ಬೆರೆಯುತ್ತಿದ್ದಾರೆ. ಹಾಗಾಗಿ ಅಭಿಷೇಕ್ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ
ಈ ಕುರಿತು ಅಭಿಷೇಕ್ ಅಂಬರೀಶ್ ನಿನ್ನೆಯಷ್ಟೇ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ಇದೀಗ ನಾನು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಒಂದು ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದೇನೆ. ರಾಜಕೀಯಕ್ಕೆ ಬರುವ ವಿಚಾರದಲ್ಲಿ ಸದ್ಯಕ್ಕೆ ಯೋಚನೆ ಮಾಡಿಲ್ಲ. ಸೂಕ್ತ ಸಮಯದಲ್ಲಿ ನಿರ್ಧಾರ ತಗೆದುಕೊಳ್ಳುತ್ತೇನೆ’ ಎಂದಿದ್ದಾರೆ. ಸೂಕ್ತ ಸಮಯದಲ್ಲಿ ಅಂದರೆ, ಅದು ಚುನಾವಣಾ ವೇಳೆಯಲ್ಲಾ? ಎನ್ನುವ ಅನುಮಾನ ಕೂಡ ಮೂಡಿದ್ದು ಸುಳ್ಳಲ್ಲ.