ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಗ್ಗೆ ಹಲವು ದಿನಗಳಿಂದ ಗಾಸಿಪ್ ಕಾಲಂನಲ್ಲಿ ಸುದ್ದಿ ಹರಿದಾಡುತ್ತಿತ್ತು. ಮೊನ್ನೆಯಷ್ಟೇ ಅಂಥದ್ದೇನೂ ಇಲ್ಲ ಎಂದೇ ಸುಮಲತಾ ಅಂಬರೀಶ್ ಹೇಳಿದ್ದರು. ಹುಡುಗಿಯನ್ನು ನೀವೇ ಹುಡುಕಿಕೊಡಿ ಎಂದೂ ತಮಾಷೆಯಾಗಿ ಅಭಿಷೇಕ್ ಹೇಳಿದ್ದರು. ಆದರೆ, ಅಭಿಷೇಕ್ ಅವರ ಎಂಗೇಜ್ ಮೆಂಟ್ ಕುರಿತು ಅವರ ಆಪ್ತರು ಖಚಿತ ಪಡಿಸಿದ್ದಾರೆ. ನಿನ್ನೆ ಅಂಬರೀಶ್ ಅವರ ಮನೆಯಲ್ಲೇ ತಾಂಬೂಲ ಬದಲಿಸಿಕೊಳ್ಳುವ ಶಾಸ್ತ್ರ ಕೂಡ ಮುಗಿದಿದೆ. ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಎನ್ನುತ್ತವೆ ಆಪ್ತ ಮೂಲಗಳು. ಅಭಿಷೇಕ್ ಎಂಗೇಜ್ ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು, ಈಗಾಗಲೇ ರಜನಿಕಾಂತ್ ಸೇರಿದಂತೆ ದಕ್ಷಿಣದ ಹಲವು ದಿಗ್ಗಜರಿಗೆ ಆಹ್ವಾನ ಕೂಡ ಹೋಗಿದೆಯಂತೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್
ಅಭಿಷೇಕ್ ಅಂಬರೀಶ್ ಅವರ ಸ್ನೇಹಿತೆಯಾಗಿರುವ ಅವಿವಾ ಬಿದ್ದಪ್ಪ ಅವರೇ ಅಭಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ. ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅವಿದಾ ಫ್ರೆಂಡ್ಸ್ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಈ ಗೆಳೆತನವೇ ಪ್ರೇಮಕ್ಕೆ ತಿರುಗಿ ಇದೀಗ ಹಸಮಣೆ ಹತ್ತಿಸುತ್ತಿದೆ.
ನಿನ್ನೆಯಷ್ಟೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ. ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು, ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ.