ಮಂಡ್ಯ: ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಂಡ್ಯದ ಜನತೆ ಹಾಗೂ ರೈತರಿಗೆ ದಿವಂಗತ ನಟ ಅಂಬರೀಶ್ ಅವರ ಅಭಿಮಾನಿಗಳು ಮಿಡಿದಿದ್ದಾರೆ.
ನಟ ಅಂಬರೀಶ್ ಹಾಗೂ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಇಂದು ಅಂಬಿ ಅಭಿಮಾನಿಗಳ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ಜೊತೆಗೆ ಅಭಿಮಾನಿಗಳೊಂದಿಗೆ ಸಂಕಷ್ಟದಲ್ಲಿರುವವರ ಮನೆಗೆ ತೆರಳಿ ದಿನಸಿ, ತರಕಾರಿ ಕಿಟ್ ವಿತರಣೆ ಮಾಡಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಹಾಗೂ ಕುದರಗುಂಡಿ ಗ್ರಾಮದ ಕೆಲವು ಬಡ ರೈತರು, ನಾಗರಿಕರಿಗೆ ಅಂಬಿ ಅಭಿಮಾನಿಗಳು ನೆರವು ನೀಡಿದ್ದಾರೆ. ಜೊತೆಗೆ ಎರಡು ಕುಟುಂಬಗಳ ನಿರ್ವಹಣೆಗೆ ಹಸು ದಾನ ಮಾಡಿದ್ದಾರೆ. ಅಂಬಿ ಅಭಿಮಾನಿಗಳ ಸೇವೆಗೆ ಅಭಿಷೇಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಇಂದು 12 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ದಾವಣಗೆರೆಯ 55 ವರ್ಷದ ಮಹಿಳೆ (ರೋಗಿ-694) ಕೊರೊನಾಗೆ ಇಂದು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ ಈವರೆಗೂ ಕೊರೊನಾದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಬಾಗಕೋಟೆಯಲ್ಲಿ ರೋಗಿ-607ರಿಂದ ಮೂವರಿಗೆ ಕೊರೊನಾ ತಗುಲಿದೆ.
ರಾಜ್ಯ ಆರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆಯಾದ ಬುಲೆಟಿನ್ನಲ್ಲಿ, ದಾವಣಗೆರೆ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ತಲಾ ಮೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯ 13 ವರ್ಷದ ಬಾಲಕಿಯಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.