ಇಸ್ಲಾಮಾಬಾದ್: ಬಾಲಾಕೋಟ್ ಏರ್ ಸ್ಟ್ರೈಕ್ ಬಳಿಕ ಯುದ್ಧ ಭೀತಿಯನ್ನ ಎದುರಿಸಿದ್ದ ಪಾಕಿಸ್ತಾನ ಸದ್ಯ ಏರ್ ಸ್ಟ್ರೈಕ್ ಬಳಿಕ ಪಾಕ್ ಸೈನಿಕರಿಗೆ ಸೆರೆಯಾಗಿದ್ದ ವಿಂಗ್ಕಮಾಂಡ್ ಅಭಿನಂದನ್ ಅವರನ್ನ ಮುಂದಿಟ್ಟು ಭಾರತದ ಕಾಲೆಳೆದಿದೆ.
ಭಾರತದೊಂದಿಗೆ ಮೇಲ್ನೋಟಕ್ಕೆ ಸ್ನೇಹ ಸಂಬಂಧಕ್ಕೆ ಸಿದ್ಧ ಎಂದು ತೋರ್ಪಡಿಸಿಕೊಂಡು ತನ್ನ ಕುತಂತ್ರಿ ಬುದ್ಧಿಯನ್ನ ಪಾಕಿಸ್ತಾನ ಮುಂದುವರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಆನ್ಲೈನ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಜಾಜ್ ಟಿವಿ ಪಾಕಿಸ್ತಾನ ಈ ಬಾರಿ ವಿಶ್ವಕಪ್ ಕುರಿತ ಪಂದ್ಯದ ಜಾಹೀರಾತಿನಲ್ಲಿ ಅಭಿನಂದನ್ರನ್ನ ಎಳೆದುತಂದಿದೆ. ಜೂನ್ 16 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಈಗಾಗಲೇ ಜಾಹೀರಾತು ನೀಡಲು ಆರಂಭಿಸಿದೆ.
ಪಾಕ್ ಜಾಹೀರಾತಿನಲ್ಲಿ ವಿಂಗ್ಕಮಾಂಡರ್ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನ ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡದ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿದೆ. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಅಂತಿಮವಾಗಿ ಆತನನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿದೆ.
Jazz TV advt on #CWC19 takes the Indo-Pak air duel to new level. It uses the air duel over Nowshera and Wing Co Abhinandan Varthaman's issue as a prop. @IAF_MCC @thetribunechd @SpokespersonMoD @DefenceMinIndia pic.twitter.com/30v4H6MOpU
— Ajay Banerjee (@ajaynewsman) June 11, 2019
ಪಾಕಿಸ್ತಾನ ಮಾಧ್ಯಮದ ಈ ಜಾಹೀರಾತಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಪಾಕ್ಗೆ ತಿರುಗೇಟು ನೀಡಿ ಭಾರತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಜೂನ್ 16 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಪುಲ್ವಾಮಾ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.