ಬೆಂಗಳೂರು: ಅಗ್ನಿಪಥ್ ಯೋಜನೆ ವಿರೋಧಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.
ಅಗ್ನಿಪಥ್ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭವಿಷ್ಯದಲ್ಲಿ ಏನೋ ಆಗುತ್ತದೆ ಅಂತ ಕೆಲವರು ಹೀಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದೊಂದು ಹೊಸ ಯೋಜನೆ. ಈ ದೇಶದಲ್ಲಿ ಏನು ಆಗಲು ಬಿಡಬಾರದು ಎನ್ನುವ ಒಂದು ವರ್ಗ ಇದೆ. ಆ ವರ್ಗ ವಿರೋಧ ಮಾಡುತ್ತಿದೆ ಎಂದು ಕಿಡಿಕಾರಿದರು.
ಯೋಜನೆ ಇನ್ನೂ ಜಾರಿಯಾಗಿಲ್ಲ. ಆಗಲೇ ವಿರೋಧ ಮಾಡಿದರೆ ಹೇಗೆ. ಇದೊಂದು ಉತ್ತಮ ಯೋಜನೆ. ಇಸ್ರೇಲ್ ದೇಶದಲ್ಲಿ ಕಡ್ಡಾಯವಾಗಿ ಸೇನೆ ತರಬೇತಿ ಇರಬೇಕು ಅಂತ ಇದೆ. ಈ ಯೋಜನೆಯಲ್ಲಿ 4 ವರ್ಷ ಟ್ರೈನಿಂಗ್ ಕೊಡುವುದಕ್ಕೆ ಸರ್ಕಾರ ಚಿಂತನೆ ಮಾಡಿದೆ. ಆದಾದ ಬಳಿಕ ಅನೇಕ ಉದ್ಯೋಗಕ್ಕೆ ಯೋಜನೆ ಅನುಕೂಲ ಆಗಲಿದೆ ಎಂದರು. ಇದನ್ನೂ ಓದಿ: ಮೋದಿ ನಾಟಕ ನಂಬಲು ಯುವಕರು ಮೂರ್ಖರಲ್ಲ: ದಿನೇಶ್ ಗುಂಡೂರಾವ್
ಇಂತಹ ಒಳ್ಳೆ ಯೋಜನೆ ವಿರುದ್ಧ ಬೆಂಕಿ ಹಚ್ಚಿದರೆ ಹೇಗೆ? 4 ವರ್ಷಗಳವರೆಗೂ ಸಂಬಳ ಸಿಗಲಿದೆ. ಬಳಿಕ ವಿಶೇಷ ಭತ್ಯೆಯೂ ಸಿಗಲಿದೆ. ಮುಂದೆ ಹಲವು ಉದ್ಯೋಗಕ್ಕೂ ಈ ಟ್ರೈನಿಂಗ್ ಅನುಕೂಲ ಆಗಲಿದೆ. ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ. ಈ ಟ್ರೈನಿಂಗ್ ಪಡೆದ ಮೇಲೆ ಶೇ. 25 ಮಿಲಿಟರಿಗೆ ನೇಮಕ ಆಗುತ್ತೆ. ಪೊಲೀಸ್ ಹುದ್ದೆ ಸೇರಿದಂತೆ ಹಲವು ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ‘ಅಗ್ನಿಪಥ್’ ಯೋಜನೆ ವಿರೋಧಿಸಿ ತೀವ್ರ ಪ್ರತಿಭಟನೆ – ರೈಲಿಗೆ ಬೆಂಕಿ
ಯೋಜನೆಗೆ ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ. ಇದರ ಹಿಂದೆ ಯಾವ ಶಕ್ತಿ ಇವೆ ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶೀಲನೆ ಮಾಡುತ್ತಿದೆ. ವ್ಯವಸ್ಥಿತ ಪಿತೂರಿ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿದೆ. ರೈಲಿಗೆ ಬೆಂಕಿ ಹಚ್ಚುತ್ತೇವೆ. ಮನೆಗೆ ಬೆಂಕಿ ಹಚ್ಚುತ್ತೇವೆ ಅಂದರೆ ಹೇಗೆ. 4 ವರ್ಷ ಯಾರಿಗೂ ಪುಕ್ಸಟ್ಟೆ ಬಿಡುವುದಿಲ್ಲ. ಅವರಿಗೆ ವಿಶೇಷ ಸಂಬಳ ಇರಲಿದೆ. ಇವತ್ತು ನಿರುದ್ಯೋಗ ತಾಂಡವ ಆಡುತ್ತಿದೆ. ನಿರುದ್ಯೋಗಿಗಳನ್ನಾಗಿ ಮಾಡಲು ಸರ್ಕಾರ ಯೋಚನೆ ಮಾಡುತ್ತಾ? ಇದ್ದಕ್ಕಿದ್ದ ಹಾಗೆ ಬೆಂಕಿ ಹಾಕುತ್ತಾರೆ. ಮಾಸ್ಕ್ ಹಾಕಿಕೊಂಡು ಬೆಂಕಿ ಹಚ್ಚುತ್ತಾರೆ. ವ್ಯವಸ್ಥಿತ ಪಿತೂರಿ ಕೇಂದ್ರದ ವಿರುದ್ದ ನಡೆಯುತ್ತಿದೆ. ಇದು ದೇಶದಲ್ಲಿ ನಡೆಯುವುದಿಲ್ಲ. ದೇಶದ ಯುವಕರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಯೋಜನೆ ಪರ ಬ್ಯಾಟಿಂಗ್ ಮಾಡಿದರು.