ಬೆಂಗಳೂರು: ಯುಪಿಎ (UPA) ಮೈತ್ರಿಕೂಟದ ಸಭೆ ಇದೇ ಜುಲೈ 17 ಹಾಗೂ 18 ರಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ಕೇಂದ್ರ ಬಿಜೆಪಿ ಸರ್ಕಾರದ ಎನ್ಡಿಎ ಮೈತ್ರಿ ಕೂಟದ ವಿರುದ್ಧ ಒಟ್ಟಾಗಿರುವ ಯುಪಿಎ ಮೈತ್ರಿಕೂಟದ ಮಹತ್ವದ ಸಭೆ ಇದಾಗಿದ್ದು, ಎರಡನೇ ಸಭೆಗೆ ಬೆಂಗಳೂರು ಸಾಕ್ಷಿಯಾಗಲಿದೆ.
ಬಿಜೆಪಿ (BJP) ವಿರೋಧಿ ಪಕ್ಷಗಳೆಲ್ಲಾ ಒಗ್ಗೂಡುತ್ತಿವೆ. ಲೋಕಸಮರದಲ್ಲಿ ಮೋದಿ ಸರ್ಕಾರವನ್ನು ಮಣಿಸುವ ಉದ್ದೇಶದಿಂದ ವಿಪಕ್ಷಗಳು ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಮಹಾಮೈತ್ರಿ ಸಭೆಯನ್ನು ನಡೆಸಲಿವೆ. ಕಾಂಗ್ರೆಸ್ (Congress) ನೇತೃತ್ವದ ಈ ಸಭೆಗೆ 24 ರಾಜಕೀಯ ಪಕ್ಷಗಳಿಗೆ ಆಹ್ವಾನ ಹೋಗಿದೆ. ಎಎಪಿಯನ್ನು ಈ ಕೂಟದ ಭಾಗವಾಗಿ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ, ದೆಹಲಿ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಸುಗ್ರಿವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ಈ ಸಭೆಯಲ್ಲಿ ಎಎಪಿಯ ಕೇಜ್ರಿವಾಲ್ ಪಾಲ್ಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಈಗಾಗಲೇ ಹಲವು ಪಕ್ಷಗಳ ಪ್ರಮುಖ ನಾಯಕರು ಒಬ್ಬೊಬ್ಬರಾಗಿಯೇ ಬೆಂಗಳೂರು ಕಡೆ ಮುಖ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಎಂಕೆ ಸ್ಟಾಲಿನ್, ಶರದ್ ಪವಾರ್, ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಹೇಮಂತ್ ಸೋರೆನ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಸೇರಿ ಪ್ರಮುಖರು ಇಂದು ಬೆಂಗಳೂರಿಗೆ ಧಾವಿಸಲಿದ್ದಾರೆ. 50ಕ್ಕೂ ಹೆಚ್ಚು ನಾಯಕರು ಈ ಸಭೆಗೆ ಬರುತ್ತಿದ್ದಾರೆ. ಮೊದಲ ದಿನವಾದ ಇಂದು ಸಂಜೆ ವಿಪಕ್ಷಗಳ ಒಕ್ಕೂಟದ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದಾರೆ. ಆದರೆ ಅನಾರೋಗ್ಯದ ಕಾರಣ ಈ ಔತಣಕೂಟದಲ್ಲಿ ಬಂಗಾಳ ಸಿಎಂ ಪಾಲ್ಗೊಳ್ಳುತ್ತಿಲ್ಲ. ಈ ಮಧ್ಯೆ ಬಿಜೆಪಿ ಸಖ್ಯ ಮಾಡಲು ಮುಂದಾಗಿರುವ ಜೆಡಿಎಸ್ಗೆ ಕಾಂಗ್ರೆಸ್ನಿಂದ ಯಾವುದೇ ಆಹ್ವಾನ ಹೋಗಿಲ್ಲ. ಪಾಟ್ನಾ ಸಭೆಯಿಂದಲೂ ಜೆಡಿಎಸ್, ಬಿಜೆಡಿ, ಬಿಎಸ್ಪಿ ಪಕ್ಷಗಳನ್ನು ದೂರ ಇಡಲಾಗಿತ್ತು. ಎರಡು ದಿನಗಳ ಕಾರ್ಯಕ್ರಮಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭಾರೀ ಸಿದ್ಧತೆಗಳು ನಡೆದಿವೆ.
ವಿಪಕ್ಷಗಳ ಮಹಾಮೈತ್ರಿ ಸಭೆ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿಯನ್ನು ಸೋಲಿಸಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ಇದರಿಂದ ಏನೂ ಆಗಲ್ಲ ಎಂದಿದ್ದಾರೆ. ಮತ್ತೆ ಮೋದಿ ಸರ್ಕಾರವೇ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿ ಎಟಿಎಂ ಸರ್ಕಾರ ಇರೋದು ಹಾಗಾಗಿ ಬೆಂಗಳೂರಿನಲ್ಲಿ ಸಭೆ ಮಾಡುತ್ತಿದ್ದಾರೆ. ಇಂದು & ನಾಳೆ ಸಭೆಯಲ್ಲಿ ಆಡಳಿತ ಯಂತ್ರದ ದುರ್ಬಳಕೆ ಸಾಧ್ಯತೆಯಿದೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: 15 ಸಾವಿರಕ್ಕಾಗಿ ಭಾರತೀಯ ಸೇನೆ ರಹಸ್ಯ ಮಾಹಿತಿಯನ್ನ ಪಾಕಿಸ್ತಾನಕ್ಕೆ ಕೊಡ್ತಿದ್ದ ವ್ಯಕ್ತಿ ಅರೆಸ್ಟ್
ಒಟ್ಟಿನಲ್ಲಿ ಹೀಗೆ 24 ಪಕ್ಷಗಳ ಮಹಾ ಮೈತ್ರಿ ಕೂಟದ ಸಭೆಗೆ ಬೆಂಗಳೂರು ಸಾಕ್ಷಿಯಾಗಲಿದೆ. ಪಾಟ್ನಾ ಸಭೆಗೆ 16 ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು, 15 ಪಕ್ಷಗಳು ಭಾಗ ವಹಿಸಿದ್ದವು. ಈ ಬಾರಿ 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು ಎಲ್ಲಾ ಪಕ್ಷಗಳು ಭಾಗವಹಿಸ್ತಾವಾ ಎಂಬ ಕುತೂಹಲವಂತೂ ಇದೆ.
Web Stories