ಬೆಂಗಳೂರು: ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಎಂಬ ಭೇದವಿಲ್ಲದೇ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಎಲ್ಲೆಡೆ ಉಚಿತವಾಗಿ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ವೈದ್ಯರ ಘಟಕದ ಅಧ್ಯಕ್ಷರಾದ ಬಿ.ಎಲ್.ವಿಶ್ವನಾಥ್, ಶೇ.75ಕ್ಕೂ ಹೆಚ್ಚು ಬೆಂಗಳೂರಿಗರು ಖಾಸಗಿ ಆಸ್ಪತ್ರೆಗಳು ಅಥವಾ ಲ್ಯಾಬೊರೇಟರಿಗಳ ಮೇಲೆ ಅವಲಂಬಿತರಾಗಿದ್ದಾರೆ. ಸಮೀಪದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲದ ಕಾರಣಕ್ಕೆ ಬಡವರು ಹಾಗೂ ಮಧ್ಯಮ ವರ್ಗದವರೂ ಖಾಸಗಿ ಮೊರೆ ಹೋಗಬೇಕಾಗಿದೆ. ಖಾಸಗಿ ಲ್ಯಾಬೊರೇಟರಿಗಳು 500 ರೂ. ಪರೀಕ್ಷಾ ಶುಲ್ಕ ಹಾಗೂ 300 ರೂ.ವರೆಗೆ ಇತರೆ ಶುಲ್ಕ ಸೇರಿ 800 ರೂಪಾಯಿವರೆಗೂ ವಸೂಲಿ ಮಾಡುತ್ತಿವೆ. ಎಲ್ಲೆಡೆಯು ಉಚಿತ ಆರ್ಟಿ-ಪಿಸಿಆರ್ ಪರೀಕ್ಷೆಗೆ ಸರ್ಕಾರವು ವ್ಯವಸ್ಥೆ ಕಲ್ಪಿಸಿ ಜನರಿಗೆ ನೆರವಾಗಬೇಕು ಎಂದು ಒತ್ತಯಿಸಿದರು. ಇದನ್ನೂ ಓದಿ: ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ
ಕೋವಿಡ್ ಟೆಸ್ಟಿಂಗ್ ಕಿಟ್ಗಳನ್ನು ಸರ್ಕಾರವು ಖಾಸಗಿ ಆಸ್ಪತ್ರೆಗಳ ಮೂಲಕವೂ ಉಚಿತವಾಗಿ ವಿತರಿಸಬೇಕು. ಇದರಿಂದ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಿ ಕೋವಿಡ್ ರೋಗಿಗಳ ನಿಜವಾದ ಸಂಖ್ಯೆ ತಿಳಿಯಲಿದೆ. ಮೂರನೇ ಅಲೆಯಲ್ಲಿ ಐಸಿಯುಗಳಿಗಿಂತ ಹೊರ ರೋಗ ಚಿಕಿತ್ಸಾ ವಿಭಾಗದ ಅವಶ್ಯಕತೆ ಹೆಚ್ಚಿದ್ದು, ಸರ್ಕಾರ ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಕೋವಿಡ್ ರೋಗಿಗಳ ಸಿಆರ್ಪಿ ಡಿ ಡೈಮರ್ ರಕ್ತ ಪರೀಕ್ಷೆಗೆ ಕೆಲವು ಲ್ಯಾಬೊರೇಟರಿಗಳಲ್ಲಿ 2,500ವರೆಗೆ ಬಿಲ್ ಮಾಡಲಾಗುತ್ತಿದೆ. ಸರ್ಕಾರ ಇದಕ್ಕೆ ರಿಯಾಯಿತಿ ದರದಲ್ಲಿ ನಿರ್ದಿಷ್ಟ ಮೊತ್ತವನ್ನು ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ಗೆ ಐವರ್ಮೆಕ್ಟಿನ್ ಹಾಗೂ ಡಾಕ್ಸಿಸೈಕ್ಲಿನ್ ಮಾತ್ರೆಗಳು ಔಷಧಿಗಳೆಂದು ಸಾಬೀತಾಗಿಲ್ಲ. ಆ ಮಾತ್ರೆಗಳಿಂದ ತೀವ್ರ ಗ್ಯಾಸ್ಟ್ರಿಕ್ ಹಾಗೂ ವಾಂತಿ ಆಗುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಅವುಗಳನ್ನು ಆರು ತಿಂಗಳ ಹಿಂದೆಯೇ ಪಟ್ಟಿಯಿಂದ ಕೈಬಿಟ್ಟಿದೆ. ಆದರೆ ಈಗಲೂ ಆ ಮಾತ್ರೆಗಳಿರುವ ಕಿಟ್ಗಳನ್ನು ಬಿಬಿಎಂಪಿ ವಿತರಿಸುತ್ತಿದೆ. ಜನರ ಆರೋಗ್ಯದ ವಿಚಾರದಲ್ಲಿ ಬಿಬಿಎಂಪಿ ಎಷ್ಟು ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ವೈದ್ಯ ಘಟಕದ ಡಾ.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ