ಗದಗ: ಕೆರೆಯಲ್ಲಿ ಕಾಣಿಸಿಕೊಂಡ ಪ್ಲಾಸ್ಟಿಕ್ ಬುಟ್ಟಿ ತರಲು ಹೋಗಿದ್ದ ಯುವಕನೊಬ್ಬ ಈಜಲು ಬಾರದೆ ಕೆರೆಯಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 20 ವರ್ಷದ ಆನಂದ ರೋಣ ಮೃತ ದುರ್ದೈವಿ. ಗ್ರಾಮದ ಕೆಂಪ ಕೆರೆಯಲ್ಲಿ ಪ್ಲಾಸ್ಟಿಕ್ ಬುಟ್ಟಿ ಕಾಣಿಕೊಂಡಿದೆ. ಈ ವೇಳೆ ಆನಂದ ಆ ಬುಟ್ಟಿ ತೆಗೆದುಕೊಂಡು ಬರಲು ಕೆರೆಯ ಬಳಿ ಹೋಗಿದ್ದಾರೆ. ಬುಟ್ಟಿ ತೆಗೆದುಕೊಂಡು ವಾಪಸ್ ಬರುವ ವೇಳೆ ಈಜಲು ಸಾಧ್ಯವಾಗದೆ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.
ಆನಂದ ಬುಟ್ಟಿ ತರಲು ಹೋಗಿದ್ದನ್ನು ಅಲ್ಲಿನ ಸ್ಥಳೀಯರು ನೋಡಿದ್ದಾರೆ. ಆದ್ರೆ ಬುಟ್ಟಿ ವಾಪಸ್ ತರುವಾಗ ಈಜಲು ಆಗದೇ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಕೆರೆಗೆ ಧುಮುಕಿದ್ದಾರೆ. ಆದರೆ ಎಷ್ಟು ಹುಡುಕಿದರೂ ಆನಂದ ಸಿಗಲಿಲ್ಲ. ನಂತರ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ಬಳಿಕ ಯುವಕನ ಮೃತ ದೇಹವನ್ನು ಹೊರತೆಗೆಯಲಾಗಿದೆ. ಈ ಕುರಿತು ಗದಗ ಜಿಲ್ಲೆ ನರೇಗಲ್ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.