ಮಂಡ್ಯ/ಉಡುಪಿ: ಹನುಮ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಟಗಾರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಪಾಲ್ಗೊಂಡಿದ್ದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಟ್ಲುಪಾಡಿಯ ಪ್ರೀತಂ ಶೆಟ್ಟಿ (24) ಸಾವಿಗೀಡಾದ ಯುವಕ.
ತಡರಾತ್ರಿ ಆಟದ ವೇಳೆ ಹೃದಯಘಾತವಾಗಿತ್ತು. ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುಖಧರೆ ಗ್ರಾಮದಲ್ಲಿ ಹನುಮ ಜಯಂತಿ ಹಿನ್ನೆಲೆ ಪ್ರೊ ಕಬಡ್ಡಿ ಪಂದ್ಯಾಟ ಏರ್ಪಡಿಸಲಾಗಿತ್ತು. ಬಹುನಿರೀಕ್ಷಿತ ಆಟಗಾರನಾಗಿ ಬಂದಿದ್ದ ಪ್ರೀತಂ ಕಬಡ್ಡಿ ಪಂದ್ಯಾಟ ಮುಗಿಸಿ ರೆಸ್ಟ್ನಲ್ಲಿ ಇರುವಾಗ ಹೃದಯಾಘಾತಕ್ಕೊಳಗಾಗಿದ್ದಾರೆ. ಲೀಗ್, ಸೆಮಿ ಎಲ್ಲಾ ಆಟಗಳನ್ನು ಗೆದ್ದುಕೊಂಡು ಬಂದು ಫೈನಲ್ ಆಟ ಒಂದೇ ಬಾಕಿ ಇತ್ತು. ಅಂತಿಮ ಘಟ್ಟ ತಲುಪುವ ಮೊದಲೇ ಪ್ರೀತಮ್ ಇಹಲೋಕ ತ್ಯಜಿಸಿದ್ದಾರೆ.
ಪ್ರೀತಂ ಪ್ರೊ ಕಬಡ್ಡಿ ಮತ್ತು ಟೀಮ್ ಇಂಡಿಯಾ ಕಬಡ್ಡಿಯಲ್ಲಿ ಆಡಿದ ಹಲವಾರು ಕ್ರೀಡಾಪಟುಗಳ ಜೊತೆ ಕೋರ್ಟ್ ಹಂಚಿಕೊಂಡಿದ್ದರು. ಪಂದ್ಯವೊಂದರಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಮಣೀಂದರ್ ಅವರನ್ನು ಪ್ರೀತಂ ಕ್ಯಾಚ್ ಮಾಡಿದ್ದ ವೀಡಿಯೋ ಹಿಂದೆ ಬಹಳ ವೈರಲ್ ಆಗಿತ್ತು. ದೃಢಕಾಯದ ವ್ಯಕ್ತಿಯಾಗಿದ್ದ ಪ್ರೀತಂಗೆ ಕಬಡ್ಡಿ ನೆಲದಲ್ಲಿ ಬಹಳ ಬೇಡಿಕೆ ಇತ್ತು.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುಟ್ಲುಪಾಡಿ ಗ್ರಾಮದ ನಿವಾಸಿಯಾಗಿರುವ ಪ್ರೀತಂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ. ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿದ್ದು, ಎಲ್ಲಾ ತಯಾರಿ ಮಾಡಿಕೊಂಡಿದ್ದ. ಮೈದಾನದಲ್ಲಿ ಕುಸಿದು ಬಿದ್ದ ಕೂಡಲೇ ಪ್ರೀತಂನನ್ನು ಸ್ಥಳೀಯ ನಾಗಮಂಗಲ ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದ.