ಮಡಿಕೇರಿ: ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajapete) ತಾಲೂಕಿನ ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಂದಾಡು ಗ್ರಾಮದಲ್ಲಿ ನಡೆದಿದೆ.
ಪಾರಾಣೆ ಗ್ರಾ.ಪಂ ಸದಸ್ಯೆ ದಾಕ್ಷಾಯಿಣಿ ಹಾಗೂ ಕುಶಾಲಪ್ಪ ಅವರ ಪುತ್ರಿ ಚಸ್ಮಿಕಾ (20) ಮೃತ ದುರ್ದೈವಿ. ಮೂರ್ನಾಡು ಸರ್ಕಾರಿ ಅನುದಾನಿತ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಚಸ್ಮಿಕಾ ಇಂದು ಬೆಳಗ್ಗೆ ಗದ್ದೆಯಲ್ಲಿ ದನ ಕಟ್ಟಲು ಕೆರೆಯ ಪಕ್ಕದ ದಾರಿಯಲ್ಲಿ ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ. ಇದನ್ನೂ ಓದಿ: ಬಂಡೆಮಠ ಸ್ವಾಮೀಜಿ ಆತ್ಮಹತ್ಯೆಗೆ ಟ್ವಿಸ್ಟ್- ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್
ಇದೀಗ ಮಗಳನ್ನು ಕಳೆದುಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತದೇಹವನ್ನು ಕೆರೆಯಿಂದ ಹೊರತೆಗೆಯಲು ನಾಪೋಕ್ಲುವಿನ ಗ್ರಾಮದ ಯುವಕರು ಅಬ್ದುಲ್ ರಜಾಕ್, ಅಬ್ದುಲ್ ಮಜೀದ್ ಹಾಗೂ ಶಮೀ ಸಹಕರಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಟಾಕಿ ತಂದ ಆಪತ್ತು – ಮಕ್ಕಳ ಬಾಳಲ್ಲಿ ಕತ್ತಲೆ ತಂದ ಬೆಳಕಿನ ಹಬ್ಬ, 78 ಮಂದಿಗೆ ಗಾಯ