ದಾವಣಗೆರೆ: ಯುವಕ ಹಾಗೂ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಯುವಕ ತನ್ನ ಗೆಳೆಯನಿಗೆ ಕರೆ ಮಾಡಿದ ಘಟನೆ ನಡೆದಿದೆ.
ಮೃತರನ್ನು ಚರಣ್(23) ಹಾಗೂ ನಾಗರತ್ನ (21) ಎಂದು ಗುರುತಿಸಲಾಗಿದೆ. ತುಮಕೂರು ಮೂಲದ ಇವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಬೆಂಕಿಕೆರೆ ಗ್ರಾಮದಲ್ಲಿ ಸಾವಿಗೆ ಶರಣಾಗಿದ್ದಾರೆ.
ಚರಣ್ ಈಗಾಗಲೇ ಮದುವೆಯಾಗಿದ್ದ ನಾಗರತ್ನಳ ಜೊತೆ ಸಂಬಂಧ ಇಟ್ಟುಕೊಂಡಿದ್ದನು. ಈ ವಿಚಾರ ನಾಗರತ್ನ ಪತಿಗೆ ಗೊತ್ತಾಗಿ ಎರಡೂ ಕುಟುಂಬದ ನಡುವೆ ಜಗಳವಾಗಿತ್ತು. ಅಲ್ಲದೆ ಪತಿ ಪ್ರಸನ್ನಕುಮಾರ್, ನಾಗರತ್ನ ಹಾಗೂ ಚರಣ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳಗಳು – ರೆಸ್ಟೋರೆಂಟ್ ವಿರುದ್ಧ ಮಹಿಳೆ ದೂರು
ಈ ಹಿನ್ನೆಲೆಯಲ್ಲಿ ಜೋಡಿ ನಾಲ್ಕು ದಿನದ ಹಿಂದೆ ಬೈಕ್ ನಲ್ಲಿ ಮನೆ ಬಿಟ್ಟು ಬಂದಿತ್ತು. ಹೀಗೆ ಬಂದ ಚರಣ್ ಸ್ನೇಹಿತನಿಗೆ ಕರೆ ಮಾಡಿ, ನಾವು ಕೆರೆಗೆ ಹಾರುತ್ತಿದ್ದೇವೆ ಬೈಕ್ ತೆಗೆದುಕೊಂಡು ಹೋಗಲು ಹೇಳು ಎಂದು ಹೇಳಿದ್ದಾನೆ. ಈ ವೇಳೆ ಸ್ನೇಹಿತ, ನಾನು ಬರುವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಜೋಡಿ ಸಾವಿನ ದಾರಿ ಹಿಡಿದೇ ಬಿಟ್ಟಿದ್ದಾರೆ.
ಬುಧವಾರ ರಾತ್ರಿ ಇಬ್ಬರು ಪಲ್ಸರ್ ಬೈಕ್ ನಲ್ಲಿ ಬಂದಿದ್ದು, ಏಕಕಾಲದಲ್ಲಿ ಇಬ್ಬರೂ ಕೆರೆಗೆ ಹಾರಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಮೃತದೇಹಗಳನ್ನ ಹೊರಗಡೆ ತೆಗೆದಿದ್ದಾರೆ.
ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.