ಕಾರವಾರ: ಪಿಗ್ಮಿ ಕಲೆಕ್ಟರ್ ಸಂಗ್ರಹಿಸಿದ್ದ ಹತ್ತು ಸಾವಿರ ರೂಪಾಯಿ ಹಣಕ್ಕಾಗಿ ಮನೆಗೆ ನುಗ್ಗಿ ವೃದ್ದೆಯನ್ನು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದ ಬಸವನಗಲ್ಲಿಯಲ್ಲಿ ನಡೆದಿದ್ದು, ಮೂರು ದಿನದ ನಂತರ ಘಟನೆ ಬೆಳಕಿಗೆ ಬಂದಿದೆ.
ಸಿದ್ದಾಪುರ ನಗರದ ಬಸವನಗಲ್ಲಿ ನಿವಾಸಿ ಗೀತಾ ಹೂಂಡೆಕರ್ (75) ಕೊಲೆಯಾದ ದುರ್ದೈವಿಯಾಗಿದ್ದಾರೆ.
ಸಹಕಾರಿ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗೀತಾ ಹೂಂಡೆಕರ್ ಪ್ರತಿ ನಿತ್ಯ ಐದರಿಂದ ಹತ್ತು ಸಾವಿರ ರೂಪಾಯಿ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದರು. ಗೀತಾ ಅವರಿಗೆ ಇಬ್ಬರು ಹೆಣ್ಮಕ್ಕಳಿದ್ದು, ಇಬ್ಬರ ಮದುವೆ ಮಾಡಿಕೊಟ್ಟಿದ್ದು, ಪತಿ ಸಾವನಪ್ಪಿರುವ ಹಿನ್ನೆಲೆ ಕೆಲವು ವರ್ಷಗಳಿಂದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಪಿಗ್ಮಿ ಸಂಹ್ರಹಿಸಿ ಮನೆಯ ಒಳಗೆ ಹೋದವಳು ಹೊರಗೆ ಬಂದಿರಲಿಲ್ಲ.
ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದು ಅವರ ಮಗಳಿಗೆ ತಿಳಿಸಿದ್ದಾರೆ. ನಂತರ ಮಗಳು ಮತ್ತು ಅಳಿಯ ಮನೆಗೆ ಆಗಮಿಸಿ ಮನೆಬಾಗಿಲು ಒಡೆದು ನೋಡಿದಾಗ ಕೊಲೆಯಾದ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ರಾತ್ರಿ ಹೊತ್ತು ಬಾತ್ರೂಂ ಮೇಲ್ಚಾವಣಿಯಿಂದ ಮನೆಗೆ ನುಗ್ಗಿ ಈಕೆಯ ಕತ್ತು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಪಿಗ್ಮಿ ಹಣವನ್ನು ಕದ್ದೊಯ್ದಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.