ಚಿಕ್ಕಮಗಳೂರು: ಆಸ್ತಿಗಾಗಿ ಮಗಳೇ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಎನ್ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ.
ಮೃತ ತಾಯಿಯನ್ನು 62 ವರ್ಷದ ಕುಸುಮ ಎಂದು ಗುರುತಿಸಲಾಗಿದೆ. 35 ವರ್ಷದ ಸುಧಾ ತನ್ನ ಸಾಕು ತಾಯಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಮಗಳು. ತಾಯಿಯನ್ನ ಕೊಲೆಗೈದಿದ್ದ ಮಗಳು ಆರಂಭದಲ್ಲಿ, ರಾತ್ರಿ ಮಲಗಿದ್ದವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದಳು. ಆದರೆ, ಪೊಲೀಸರ ತನಿಖೆಯ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಚಿನ್ನ ಮಾರಾಟ ಮಾಡಿ, ಹಣ ಕೊಡೋದಾಗಿ ವಂಚನೆ – 1.6 ಕೋಟಿ ಮೌಲ್ಯದ 1,300 ಗ್ರಾ0 ಲಪಟಾಯಿಸಿದ್ದ ಇಬ್ಬರು ಅರೆಸ್ಟ್
ಮೂಲತಃ ಹಾವೇರಿ ಜಿಲ್ಲೆಯವರಾದ ಕುಸುಮ ಬಹಳ ವರ್ಷಗಳ ಹಿಂದೆಯೇ ಬಾಳೆಹೊನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ವಾಸವಿದ್ದರು. ಮೃತ ಕುಸುಮಾಗೆ ಮಕ್ಕಳಿಲ್ಲದ ಕಾರಣ ತಂಗಿಯ ಮಗುವನ್ನು ತಾನೇ ಸಾಕುತ್ತಿದ್ದಳು. ಹಾವೇರಿಯಲ್ಲಿರುವ ಒಂದೂವರೆ ಎಕರೆ ಜಮೀನು ಹಾಗೂ ಒಂದು ಮನೆ ನನ್ನ ಕೈತಪ್ಪುತ್ತೆ ಎಂದು ಸುಧಾ, ರಾತ್ರಿ ಮಲಗಿದ್ದ ತಾಯಿಗೆ ತಲೆ ದಿಂಬಿನಿಂದ ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಆರೋಪಿಯನ್ನು ಬಂಧಿಸಿರುವ ಬಾಳೆಹೊನ್ನೂರು ಪೊಲೀಸರು ಆಕೆಯನ್ನ ಜೈಲಗಟ್ಟಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡಿಕ್ಕಿಯಲ್ಲಿ ಮಾತ್ರವಲ್ಲ ಕಾರಿನ ಮುಂಭಾಗದಲ್ಲೂ ಇತ್ತು ಸ್ಫೋಟಕ!

