ರಾಮನಗರ: ರಸ್ತೆ ಅಪಘಾತದಲ್ಲಿ (Road Accident) ಗಂಭೀರವಾಗಿ ಗಾಯಗೊಂಡಿದ್ದ ಗೃಹಿಣಿ ಚಿಕಿತ್ಸೆ ಫಲಕಾರಿಯಾಗದೇ 45 ದಿನಗಳ ಜೀವನ್ಮರಣ ಹೋರಾಟದ ಬಳಿಕ ಭಾನುವಾರ ಮೃತಪಟ್ಟಿದ್ದಾರೆ.
ಚನ್ನಪಟ್ಟಣ ತಾಲೂಕಿನ ಕೂಡೂರು ಗ್ರಾಮದ ಸೌಂದರ್ಯ ಅರಸ್ (20) ಮೃತಪಟ್ಟ ಗೃಹಿಣಿ. ಕಳೆದ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈಕೆ ಆಗಸ್ಟ್ 24ರಂದು ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಚನ್ನಪಟ್ಟಣದ ಸಿಪಿಟಿ ಗಾರ್ಡನ್ ಮುಂಭಾಗದ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ (Bike) ಡಿಕ್ಕಿ ಹೊಡೆದಿತ್ತು. ಕೆಳಗೆ ಬಿದ್ದ ಸೌಂದರ್ಯ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು. ಅವರನ್ನು ಬಿಡದಿ ಆರಾಧ್ಯ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳು (Brian) ನಿಷ್ಕ್ರಿಯಗೊಂಡಿದ್ದರಿಂದ ಭಾನುವಾರ ಸೌಂದರ್ಯ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸೀಗೆ ಹುಣ್ಣಿಮೆ ದಿನ ಪುನೀತ್ ರಾಜ್ಕುಮಾರ್ ಫೋಟೋ ಇಟ್ಟು ಹೊಲದ ಪೂಜೆ ಮಾಡಿದ ರೈತ
ಒಂದೂವರೆ ತಿಂಗಳ ಚಿಕಿತ್ಸೆಗೆ ಈಗಾಗಲೇ ಕುಟುಂಬ 7 ಲಕ್ಷ ರೂ. ಬಿಲ್ ಪಾವತಿಸಿತ್ತು. ಆದಾಗ್ಯೂ ಆಸ್ಪತ್ರೆ ಮುಖ್ಯಸ್ಥರು ಬಾಕಿ 9.50 ಲಕ್ಷ ರೂ. ಪಾವತಿಸಿ ಮೃತದೇಹ ಪಡೆಯುವಂತೆ ಸೂಚಿಸಿದ್ದರು. ಇದು ಕುಟುಂಬವನ್ನು ವಿಚಲಿತಗೊಳಿಸಿತ್ತು. ಈ ವಿಚಾರವನ್ನು ಗ್ರಾಮದ ಮುಖಂಡರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ಗಮನಕ್ಕೆ ತಂದಿದ್ದರು. ಕೂಡಲೇ ಹೆಚ್ಡಿಕೆ ಆಸ್ಪತ್ರೆ ಮುಖ್ಯಸ್ಥರಿಗೆ ಕರೆ ಮಾಡಿ, ಬಾಕಿ ಹಣ ಪಾವತಿಸುವ ಭರವಸೆ ನೀಡಿದರು. ಬಳಿಕ ಆಸ್ಪತ್ರೆ ಮುಖ್ಯಸ್ಥರು ಸೌಂದರ್ಯ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.