ಭೋಪಾಲ್: ಮಧ್ಯಪ್ರದೇಶದ (Madhya Pradesh) ಸೆಹೋರ್ನಲ್ಲಿ ಉದ್ಯಮಿ ಹಾಗೂ ಅವರ ಪತ್ನಿ ನೇಣಿಗೆ ಶರಣಾದ ಘಟನೆ ನಡೆದಿದೆ. ಸೆಹೋರ್ ಮತ್ತು ಇಂದೋರ್ನಲ್ಲಿರುವ ಉದ್ಯಮಿಯ ಆಸ್ತಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ (ED Raids) ನಡೆಸಿದ ಒಂದು ವಾರದ ನಂತರ ಆಘಾತಕಾರಿ ಘಟನೆ ನಡೆದಿದೆ.
ಮೃತ ದಂಪತಿಯನ್ನು ಮನೋಜ್ ಪರ್ಮಾರ್ ಮತ್ತು ಪತ್ನಿ ನೇಹಾ ಪರ್ಮಾರ್ ಎಂದು ಗುರುತಿಸಲಾಗಿದೆ. ದಂಪತಿಯ ಶವ ಮನೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪರ್ಮಾರ್ ಅವರ ನಿವಾಸದಿಂದ ಪೊಲೀಸರು ಡೆತ್ ನೋಟ್ನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ವಿಷಯಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
ಇ.ಡಿ ಅಧಿಕಾರಿಗಳು ಡಿ.5 ರಂದು ಪರ್ಮಾರ್ ಅವರಿಗೆ ಸೇರಿದ 4 ಜಾಗಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಕೆಲವು ಪ್ರಮುಖ ಆಭರಣ ವ್ಯಾಪಾರಿಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸೇರಿದಂತೆ ಹಲವಾರು ಇತರ ಉದ್ಯಮಿಗಳ ಮೇಲೂ ದಾಳಿ ನಡೆಸಲಾಗಿತ್ತು. ದಾಳಿಯ ವೇಳೆ ಇ.ಡಿ ಹಲವಾರು ಚರ ಮತ್ತು ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ 6 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು ಎಂದು ವರದಿಯಾಗಿದೆ.
ಇ.ಡಿ ದಾಳಿ ಬಳಿಕ ದಂಪತಿಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇ.ಡಿ ಕಿರುಕುಳ ಹಾಗೂ ಒತ್ತಡದಿಂದ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಮನೋಜ್ ಅವರ ಕಿರಿಯ ಸಹೋದರ ಕೈಲಾಶ್ ಪರ್ಮಾರ್ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಪ್ರತಿಕ್ರಿಯಿಸಿ ಈ ಸಾವಿಗೆ ಇ.ಡಿ ಅಧಿಕಾರಿಗಳು ಹೊಣೆಗಾರರಾಗಿದ್ದಾರೆ. ಪರ್ಮಾರ್ ಅವರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗಿದೆ. ಅವರ ಮಕ್ಕಳು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಉಡುಗೊರೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.