ಶಿವಮೊಗ್ಗ: ಕಲ್ಯಾಣ ಮಂಟಪಕ್ಕೆ ನೆಂಟನಂತೆ ಬಂದು ಕೈಚಳಕ ತೋರಲು ಯತ್ನಿಸಿದ ಕಳ್ಳನಿಗೆ ಮದುವೆಗೆ ಬಂದವರೇ ಭರ್ಜರಿ ಗೂಸಾ ಕೊಟ್ಟ ಘಟನೆ ಶಿವಮೊಗ್ಗದ ಗೌಡಸಾರಸ್ವತ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಶಿವಮೊಗ್ಗದ ಬೊಮ್ಮನಕಟ್ಟೆಯ ಜುಬೇರ್ ಮದುವೆ ಮನೆಗೆ ಕಳ್ಳತನಕ್ಕೆ ಹೋಗಿ ಪೊಲೀಸರ ಅತಿಥಿಯಾದ ಯುವಕ. ರಾತ್ರಿ ವಧುವಿನ ಕೋಣೆಗೆ ನುಗ್ಗಿ ಬಾಗಿಲು ಹಾಕಿಕೊಂಡು ಬ್ಯಾಗ್ ಗಳಲ್ಲಿ ಹಣ-ಬಂಗಾರಕ್ಕಾಗಿ ಹುಡುಕುತ್ತಿದ್ದ. ಈ ಸಂದರ್ಭದಲ್ಲಿ ಮಧುಮಗಳು ಹಾಗೂ ಇನ್ನಿತರರು ಹೊರಗೆ ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದರು. ಈತ ಒಳ ಹೋಗಿದ್ದನ್ನು ಗಮನಿಸಿದ ನೆಂಟರೆಲ್ಲರೂ ಸೇರಿ ಜುಬೇರ್ ನನ್ನು ಹಿಡಿದು ತದುಕಿದ್ದಾರೆ.
ಕಳ್ಳತನ ಮಾಡುವ ಮುನ್ನವೇ ಆತನನ್ನ ಹಿಡಿದು ಧರ್ಮದೇಟು ನೀಡಿ ನಂತರ ದೊಡ್ಡ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.