ಭೋಪಾಲ್: ಹಗಲಿನಲ್ಲಿ ಟೈಲರ್ ಕೆಲಸ ಮಾಡಿ ರಾತ್ರಿ ವೇಳೆ ಮನುಷ್ಯರನ್ನು ಕೊಲೆ ಮಾಡಿ ತೃಪ್ತಿ ಪಡುತ್ತಿದ್ದ ವಿಕೃತ ಮನಸ್ಸಿನ ವ್ಯಕ್ತಿಯನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಭೋಪಾಲ್ನ ಮನ್ದೀಪ್ ನಿವಾಸಿ ಆದೇಶ್ ಖಾಮ್ರಾ ಬಂಧಿತ ಆರೋಪಿ. 2010 ರಲ್ಲಿ ಅಮರಾವತಿಯಲ್ಲಿ ಮೊದಲ ಬಾರಿಗೆ ಕೊಲೆ ಮಾಡಿದ್ದ. ಅಲ್ಲಿಂದ ಪ್ರಾರಂಭವಾದ ಆತನ ವಿಕೃತ ವರ್ತನೆಯಿಂದ ನಾಸಿಕ್, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 36 ಜನರು ಕೊಲೆಯಾಗಿದ್ದಾರೆ.
ಮಧ್ಯರಾತ್ರಿ ಭೋಪಾಲ್ ನಗರದ ಎಸ್ಪಿ ಬಿತ್ತು ಶರ್ಮಾ ನೇತೃತ್ವದ ತಂಡದ ಬಲೆಗೆ ಆದೇಶ್ ಸಿಕ್ಕಿಬಿದ್ದಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ವಿಚಿತ್ರ ಸತ್ಯಗಳು ಬಯಲಿಗೆ ಬಂದಿವೆ. ನನ್ನ ಟಾರ್ಗೆಟ್ ಟ್ರಕ್ ಚಾಲಕರು ಎಂದು ಆದೇಶ್ ತಿಳಿಸಿದ್ದಾನೆ.
ಟ್ರಕ್ ಚಾಲಕರೇ ಏಕೆ?
ಟ್ರಕ್ ಚಾಲಕರ ಜೀವನ ಬಹಳ ಕಷ್ಟದಿಂದ ಕೂಡಿದೆ. ಅವರಿಗೆ ಮುಕ್ತಿ ನೀಡುವುದಕ್ಕಾಗಿ ನಾನು ಅವರನ್ನು ಕೊಲೆ ಮಾಡುತ್ತಿದ್ದೆ. ನಾನು ಕೊಲೆ ಮಾಡಿದ್ದು ಹೆಚ್ಚಾಗಿ ಹೆಚ್ಚಾಗಿ ಟ್ರಕ್ ಚಾಲಕರು ಹಾಗೂ ಅವರ ಸಹಾಯಕನನ್ನೆ ಎಂದು ಆದೇಶ್ ಒಪ್ಪಿಕೊಂಡಿದ್ದಾನೆ.
ಆದೇಶ್ ತನ್ನ ಗ್ಯಾಂಗ್ ಜೊತೆಗೂಡಿ ಟ್ರಕ್ ಚಾಲಕರನ್ನು ಲೂಟಿ ಮಾಡುತ್ತಿದ್ದ. ಲೂಟಿ ಮಾಡಿದ ಬಳಿಕ ಉದ್ದನೆಯ ಹಗ್ಗವನ್ನು ಚಾಲಕರ ಕುತ್ತಿಗೆಗೆ ಬಿಗಿದು ಕೊಲೆ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಮೃತ ದೇಹದ ಬಟ್ಟೆ ಬಿಚ್ಚಿ, ಹೆಣದ ಗುರುತು ಸಿಗದಂತೆ ಮಾಡಿ, ಬೆಟ್ಟ ಪ್ರದೇಶದಲ್ಲಿ ಎಸೆಯುತ್ತಿದ್ದ. ಇಲ್ಲವೇ ಮಣ್ಣಿನಲ್ಲಿ ಹೂಳುತ್ತಿದ್ದ. ಕೆಲವೊಮ್ಮೆ ಕೊಲೆ ಮಾಡಲು ಚಾಲಕರಿಗೆ ವಿಷ ಕುಡಿಸುತ್ತಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆದೇಶ್ ಚಿಕ್ಕಪ್ಪ ಅಶೋಕ್ ಖಾಮ್ರಾ ಕೂಡಾ ಸುಮಾರು 100 ಟ್ರಕ್ ಚಾಲಕರನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಆತನ ಪ್ರೇರಣೆಯಿಂದಲೇ ಆದೇಶ್ ಈ ಕೃತ್ಯಕ್ಕೆ ಮುಂದಾಗಿರಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv