ಬೆಂಗಳೂರು: ರೋಗ ಗುಣಪಡಿಸುವುದಾಗಿ ನಕಲಿ ಸ್ವಾಮೀಜಿಯೊಬ್ಬ ತೀರ್ಥ ಕುಡಿಸಿ ಮಹಿಳೆಯ ಚಿನ್ನ ದೋಚಿದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನ 1 ನೇ ಹಂತದಲ್ಲಿ ನಡೆದಿದೆ.
ಸ್ವಾಮೀಜಿ ಪಾಶ್ರ್ವವಾಯು ರೋಗ ಗುಣಪಡಿಸುವುದಾಗಿ ಅಶ್ವತ್ ರೆಡ್ಡಿ ಎಂಬುವರ ಮನೆಯಲ್ಲಿ ಚಿನ್ನಾಭರಣವನ್ನು ಕದ್ದಿದ್ದು, ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ?
ಅಶ್ವತ್ ರೆಡ್ಡಿ ಅವರ ತಾಯಿ ಪಾಶ್ರ್ವವಾಯು ಸಮಸ್ಯೆಯಿಂದ ಬಳಲುತ್ತಿದರು. ಈ ಖಾಯಿಲೆಯನ್ನು ಪೂಜೆ ಮಾಡಿ ಗುಣಪಡಿಸುತ್ತೇನೆ ಎಂದು ನಕಲಿ ಸ್ವಾಮೀಜಿ ಹೇಳಿದ್ದಾನೆ. ಸ್ವಾಮೀಜಿಯ ಮಾತನ್ನು ನಂಬಿ ಪೂಜೆಗೆ ತಾಯಿ ಮಗಳು ಒಪ್ಪಿದ್ದಾರೆ. ಪೂಜೆ ವೇಳೆ ಚಿನ್ನಾಭರಣ ಧರಿಸುವಂತೆ ಹೇಳಿದ್ದಾನೆ. ಇದನ್ನು ನಂಬಿದ ತಾಯಿ-ಮಗಳು ಚಿನ್ನಾಭರಣ ಧರಿಸಿ ಕುಳಿತ್ತಿದ್ದರು.
ಈ ವೇಳೆ ಪೂಜೆ ನೆಪದಲ್ಲಿ ಮತ್ತು ಬರುವ ಔಷಧಿಯನ್ನು ತೀರ್ಥ ರೂಪದಲ್ಲಿ ಕುಡಿಸಿ ಚಿನ್ನವನ್ನು ದರೋಡೆ ಮಾಡಿದ್ದಾನೆ. ಒಟ್ಟು 160 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾನೆ.
ಸ್ವಾಮೀಜಿ ಪೂಜೆ ಒಪ್ಪಿಕೊಂಡ ವಿಚಾರವನ್ನು ಮಗನಿಗೆ ತಿಳಿಸಿದರೆ ಬೈತಾನೆ ಎನ್ನುವ ಕಾರಣಕ್ಕೆ ಅಶ್ವತ್ ರೆಡ್ಡಿಗೆ ತಾಯಿ ತಿಳಿಸಿರಲಿಲ್ಲ. ಆದರೆ ಚಿನ್ನ ಕಳ್ಳತನವಾದ ಬಳಿಕ ಮಗನಿಗೆ ತಿಳಿಸಿದ್ದು, ಈಗ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ. ಮಡಿವಾಳ ಪೊಲೀಸರಿಂದ ಆರೋಪಿಗಾಗಿ ಶೋಧಕಾರ್ಯ ಮುಂದುವರೆದಿದೆ.