ಬೆಂಗಳೂರು: ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಆಸ್ತಿ ಮುಟ್ಟುಗೋಲು ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಪಿಎಫ್ಐ ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ಆಗುತ್ತಿದೆ. ಎಷ್ಟು ಆಸ್ತಿ ಇದೆ ಅಂತ ಸರ್ವೆ ಬಳಿಕ ಮಾಹಿತಿ ಲಭ್ಯವಾಗಲಿದೆ. ಸರ್ವೆಯ ಬಳಿಕ ಮುಟ್ಟುಗೋಲು ಪ್ರಕ್ರಿಯೆ ನಡೆಯುತ್ತೆ ಎಂದರು.
ಪಿಎಫ್ಐ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರ ಸೂಚಿಸಿದಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ಈಗಾಗಲೇ ರಾಜ್ಯಗಳಿಗೆ ಕೇಂದ್ರ ಅಧಿಕಾರ ಕೊಟ್ಟಿದೆ. ರಾಜ್ಯಕ್ಕೆ ಅಧಿಕಾರ ಕೊಟ್ಟಿರೋ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆಗಳನ್ನು ಕಾನೂನು ಪ್ರಕಾರ ನಾವು ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ ಭಾರತವಾಗಿ ಉಳಿಯಬೇಕೆಂದು ಬಯಸುವುದು RSS: ಸಿ.ಟಿ ರವಿ
ಇದೇ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಆರಗ, ಕಾಂಗ್ರೆಸ್ (Congress) ಅವ್ರಿಗೆ ಕೆಲವು ಸಂಘಟನೆಗಳ ಮೇಲೆ ಸಾಫ್ಟ್ ಕಾರ್ನರ್ ಇದೆ. ಸಿದ್ದರಾಮಯ್ಯ (Siddaramaiah) ಸರ್ಕಾರ ಅಧಿಕಾರಕ್ಕೆ ಬಂದು ಮಾಡಿದ ಮೊದಲ ಕೆಲಸ ಪಿಎಫ್ಐ ಸೇರಿದಂತೆ ಹಲವು ಸಂಘಟನೆ ಮೇಲೆ ಇದ್ದ ಕೇಸ್ ವಾಪಸ್ ಪಡೆದಿದ್ದಾಗಿದೆ. ಆ ಸಂಘಟನೆ ಅವರಿಗೆ ರಕ್ಷಣೆ ಕೊಟ್ಟಿದ್ದು. ನಾವು ನಿಮ್ಮ ಜೊತೆ ಇದ್ದೇವೆ ಅಂತ ಅಭಯ ಕೊಟ್ಟಿತ್ತು. ಕಾಂಗ್ರೆಸ್ ಗೆ ಕುರ್ಚಿ, ಅಧಿಕಾರದ ಆಸೆ. ಹೀಗಾಗಿ ಅವರ ಪರ ಮಾತಾಡ್ತಾರೆ ಎಂದರು.
ಕಾಂಗ್ರೆಸ್ ಅವರಿಗೆ ದೇಶ ಮೊದಲು ಎಂಬ ಮನಸ್ಥಿತಿ ಇಲ್ಲ. ಅದಕ್ಕೆ ಇವತ್ತು ಕಾಂಗ್ರೆಸ್ ಈ ಮಟ್ಟಕ್ಕೆ ತಲುಪಿದೆ. ಆರ್ಎಸ್ಎಸ್ ರಾಷ್ಟ್ರಭಕ್ತರನ್ನ ನಿರ್ಮಾಣ ಮಾಡುವ ಸಂಘ. ಜನರಲ್ಲಿ ಚಾರಿತ್ರ್ಯ ನಿರ್ಮಾಣ ಮಾಡುವ ಕೆಲಸ ಮಾಡ್ತಿದೆ. ಪಿಎಫ್ಐ ಅನ್ನೋ ಮತೀಯ ಸಂಘಟನೆ ಜೊತೆಗೆ ಆರ್ಎಸ್ಎಸ್ ಹೋಲಿಕೆ ಮಾಡೋದೆ ತಪ್ಪು. ಹೀಗೆ ಹೋಲಿಕೆ ಮಾಡೋರಿಗೆ ಮಾನಸಿಕವಾಗಿ ದರಿದ್ರತನ ಇದೆ ಎಂದು ಸಿದ್ದರಾಮಯ್ಯ ವಿರುದ್ಧ ಆರಗ ಆಕ್ರೋಶ ಹೊರಹಾಕಿದರು.