ನಿರ್ದೇಶಕ ನಾಗಶೇಖರ್ ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾ ಮಾಡುವುದಾಗಿ ಘೋಷಿಸುತ್ತಿದ್ದಂತೆಯೇ ಹತ್ತಾರು ಕುತೂಹಲದ ಸಂಗತಿಗಳು ನೋಡುಗರ ಮನದಲ್ಲಿ ಹಾದು ಹೋಗಿದ್ದವು. ನಟನೆಯಿಂದ ದೂರು ಉಳಿದಿರುವ ರಮ್ಯಾ ಮತ್ತೆ ಈ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವುದರಿಂದ ಹಿಡಿದು, ಇದು ಸತ್ಯ ಘಟನೆಯನ್ನು ಆಧರಿಸಿದ ಸಿನಿಮಾನಾ ಎಂಬಲ್ಲಿಗೆ ಪ್ರಶ್ನೆಗಳು ಬಂದು ತಲುಪಿದ್ದವು.
ಈ ಸಿನಿಮಾದ ಕುರಿತು ಹತ್ತಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರ್ದೇಶಕ ನಾಗಶೇಖರ್ (Nagashekhar). ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಾಯಕನಾದರೆ, ರಮ್ಯಾ ನಾಯಕಿ. ಆದರೆ, ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ (Srinagar Kitty) ಮುಂದುವರೆದರೆ, ರಮ್ಯಾ (Ramya) ನಾಯಕಿಯಾಗಿ ನಟಿಸುತ್ತಿಲ್ಲ. ಅದರ ಬದಲು ರಚಿತಾ ರಾಮ್ (Rachita Ram) ಅವರಿಗೆ ಮಣೆ ಹಾಕಿದ್ದಾರಂತೆ ನಾಗಶೇಖರ್. ಆದರೆ, ರಚಿತಾ ಈವರೆಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಮೊದಲ ಭಾಗದ ಕಥೆಯನ್ನು ರಾಜ್ಯದ ಒಬ್ಬ ಪೊಲೀಸ್ ಅಧಿಕಾರಿ ಹೇಳಿದ್ದರು. ಅವರು ತನಿಖೆ ಮಾಡಿದ್ದ ಕೇಸ್ ಅನ್ನು ಆಧರಿಸಿದ ಸಿನಿಮಾ ಅದಾಗಿತ್ತು. ಪಾರ್ಟ್ 2 ಸಿನಿಮಾಗೆ ಕಥೆ ಹೇಳಿದ್ದು ಕನ್ನಡದ ಒಬ್ಬ ಸೂಪರ್ ಸ್ಟಾರ್ ಅಂತೆ. ಈ ಕುರಿತು ನಾಗಶೇಖರ್ ಮಾತನಾಡಿದ್ದಾರೆ. ಆದರೆ, ಆ ಸ್ಟಾರ್ ಯಾರು ಎನ್ನುವ ಕುತೂಹಲವನ್ನು ಅವರು ಬಿಟ್ಟುಕೊಟ್ಟಿಲ್ಲ. ಸ್ಟಾರ್ ನಟರೊಬ್ಬರು ಹೇಳಿದ ಕಥೆಯನ್ನೇ ಡವೆಲಪ್ ಮಾಡಿದ್ದೇನೆ ಎಂದಿದ್ದಾರೆ ನಾಗಶೇಖರ್.
ರಮ್ಯಾ ಈ ಸಿನಿಮಾದಲ್ಲಿ ನಟಿಸಲೇಬೇಕು ಎನ್ನುವುದು ನಾಗಶೇಖರ್ ಒತ್ತಾಸೆ. ನಾಯಕಿಯಾಗಿ ನಟಿಸದೇ ಇದ್ದರೂ, ಅತಿಥಿ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಅವರದ್ದು. ರಮ್ಯಾಕೃಷ್ಣ, ಪ್ರಕಾಶ್ ರೈ ಸೇರಿದಂತೆ ಹಲವರು ತಾರಾಗಣದಲ್ಲಿ ಇರಲಿದ್ದಾರಂತೆ. ಈಗಾಗಲೇ ಹಾಡುಗಳಿಗೆ ಸಂಗೀತ ಸಂಯೋಜನೆ ಕೆಲಸ ನಡೆಯುತ್ತಿದೆ ಎನ್ನುವುದು ನಾಗಶೇಖರ್ ಮಾತು.
Web Stories