ಗದಗ: ಅತಿಥಿ ಶಿಕ್ಷಕನೊಬ್ಬನ ಅಟ್ಟಹಾಸದಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇಬ್ಬರು ಶಿಕ್ಷಕರು ಗಾಯಗೊಂಡಿರುವ ಘಟನೆ ಜಿಲ್ಲೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. 9 ವರ್ಷದ ಬಾಲಕ ಭರತ್ ಬಾರಕೇರ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಮುತ್ತಪ್ಪ ಹಡಗಲಿ ಎಂಬ ಅತಿಥಿ ಶಿಕ್ಷಕನಿಂದ ಈ ಕೃತ್ಯ ನಡೆದಿದೆ. ಹಲ್ಲೆ ಪ್ರಶ್ನಿಸಿದ ವಿದ್ಯಾರ್ಥಿಯ ತಾಯಿ, ಶಿಕ್ಷಕಿ ಗೀತಾ ಬಾರಕೇರ್ ಹಾಗೂ ಇನ್ನೊಬ್ಬ ಶಿಕ್ಷಕ ಪಾಟೀಲ ಎಂಬವರ ಮೇಲೂ ಹಲ್ಲೆ ಮಾಡಲಾಗಿದೆ. ಮೃತ ವಿದ್ಯಾರ್ಥಿ ಭರತ್ ತಾಯಿಯೂ ಅದೇ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುತ್ತಪ್ಪ ಹಡಗಲಿಗೆ ಶಿಕ್ಷಕಿ ಗೀತಾ ಬಾರಕೇರ ಮೇಲೆ ವೈಯಕ್ತಿಕ ದ್ವೇಷ ಇರಬಹುದು ಎನ್ನಲಾಗ್ತಿದೆ. ಇದರ ಪರಿಣಾಮವೇ ಈ ಘಟನೆಗೆ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಒಡೆತನ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ
ವಿದ್ಯಾರ್ಥಿ ಭರತನ ಮೇಲೆ ಹಲ್ಲೆ ಮಾಡಿ ಅತಿಥಿ ಶಿಕ್ಷಕ ಮಹಡಿಯಿಂದ ದೂಡಿದ್ದಾನೆ. ಇದರಿಂದಾಗಿ ಭರತನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆಸ್ಪತ್ರೆ ಸಾಗಿಸುವ ವೇಳೆ ಮಾರ್ಗಮಧ್ಯ ಮೃತಪಟ್ಟಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ವಿದ್ಯಾರ್ಥಿ ತಾಯಿ, ಶಿಕ್ಷಕಿ ಗೀತಾ ಬಾರಕೇರ್ ಮೇಲೂ ಸಲಾಕೆಯಿಂದ ಹಲ್ಲೆ ಮಾಡಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಿಡಿಸಲು ಬಂದ ಇನ್ನೊಬ್ಬ ಶಿಕ್ಷಕ ಪಾಟೀಲ ಎಂಬವರ ಮೇಲೂ ಹಲ್ಲೆ ಮಾಡಿದ್ದಾನೆ.
ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೀತಾ ಬಾರಕೇರ್ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ಗೆ ರವಾನೆ ಮಾಡಲಾಗಿದೆ. ಸುದ್ದಿ ತಿಳಿದು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರಿಂದ ನಾಡದ್ರೋಹಿ ಘೋಷಣೆ – 20ಕ್ಕೂ ಹೆಚ್ಚು ಮಂದಿ ವಶ