ಚಿಕ್ಕಬಳ್ಳಾಪುರ: ಆಸ್ತಿ ತೆರಿಗೆ ಪಾವತಿಸುವಂತೆ ಕೆ.ಎಸ್.ಆರ್.ಟಿ.ಸಿ ಡಿಸಿ ಆಂಥೋನಿ ಜಾರ್ಜ್ಗೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಕಾಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತೆರಿಗೆ ಪಾವತಿಸಿ ಇಲ್ಲದಿದರೆ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸೇವೆ, ವಹಿವಾಟಿಗೆ ಬ್ರೇಕ್ ಹಾಕುತ್ತೀವಿ ಎಂದು ಎಚ್ಚರಿಕೆ ನೀಡಿ ನಗರಸಭೆ ಕಮಿಷನರ್ ಕೋರ್ಟ್ ಮೆಟ್ಟಿಲೇರಿದ್ದಾರೆ. 1984ರಿಂದ ಇಲ್ಲಿಯವರೆಗೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಆಸ್ತಿ ತೆರಿಗೆ ಪಾವತಿ ಮಾಡದೇ 95 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ.
ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಇರಲಿಲ್ಲವಾದ ಕಾರಣ ನಗರಸಭೆ ಖಾಸಗಿ ಬಸ್ ನಿಲ್ದಾಣ ಬಳಸಿಕೊಳ್ಳುತಿತ್ತು. ಪ್ರತಿ ಟ್ರಿಪ್ ಗೂ ಇಂತಿಷ್ಟು ಎಂದು ಶುಲ್ಕ ಕಟ್ಟಬೇಕಿತ್ತು. ಅದನ್ನೂ ಕೂಡ ಕಟ್ಟಿಲ್ಲ. ಹಾಗಾಗಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಒಟ್ಟಾರೆ ಆಸ್ತಿ ಮೇಲೆ ಬಡ್ಡಿ ಸಮೇತ ವಸೂಲಿ ಮಾಡಲು ನಗರಸಭೆ ಮುಂದಾಗಿದೆ.
ಆದರೆ ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಡಿಸಿ ಆಂಥೋನಿ ಹೇಳೋದೇ ಬೇರೆ. ನಿಗದಿತ ಕಾಲಕ್ಕೆ 5 ಲಕ್ಷ ರೂ. ಟ್ಯಾಕ್ಸ್ ಪಾವತಿಸಿದ್ದೇವೆ. ಬಸ್ ಗಳ ಟ್ರಿಪ್ ಬಗ್ಗೆಯಾಗಲಿ ಅಥವಾ ನಗರಸಭೆ ಬಸ್ ನಿಲ್ದಾಣ ಪ್ರವೇಶ ಮಾಡಿದ್ದರ ಬಗ್ಗೆಯಾಗಲಿ ನಗರಸಭೆ ಯಾವುದೇ ದಾಖಲೆ ನೀಡದೇ ಮನಸ್ಸೋ ಇಚ್ಛೆ 80 ಲಕ್ಷ, 90 ಲಕ್ಷ ರೂ. ಟ್ಯಾಕ್ಸ್ ಕಟ್ಟಿ ಎಂದರೆ ಹೇಗೆ ಕಟ್ಟೋಕಾಗುತ್ತೆ ಸ್ವಾಮಿ? ಎಂದು ಆಂಥೋನಿ ಹೇಳಿದ್ದಾರೆ.