ಬೆಂಗಳೂರು: ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರರಂಗಕ್ಕಾಗಿ ದುಡಿದ ನಿರ್ಮಾಪಕನ ಕರುಣಾಜನಕ ಕಥೆ ಇದು. `ರವಿವರ್ಮನ ಕುಂಚದ ಕಲೆ ಬಲೆ ಸಕಾರವೋ’ ಈ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ.
ಸೊಸೆ ತಂದ ಸೌಭಾಗ್ಯ ಸಿನಿಮಾದ ಹೆಸರಾಂತ ನಿರ್ಮಾಪಕ ಎಸ್.ಡಿ ಅಂಕಲಗಿ ಅವರ ಈಗಿನ ಪರಿಸ್ಥಿತಿ ನೋಡಿದರೆ ಮನಕಲಕುತ್ತೆ. ಡಾ. ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಶ್ರೀನಾಥ್, ಮಂಜುಳ, ಜಯಂತಿ, ವಜ್ರಮುನಿಯಂತ ಟಾಪ್ ಸ್ಟಾರ್ಗಳಿಗೆ ಸಂಭಾವನೆ ಕೊಟ್ಟ ಕೈಯಲ್ಲಿ ಈಗ ಬಿಡಿಗಾಸಿಲ್ಲ.
8ಕ್ಕೂ ಹೆಚ್ಚು ಸೂಪರ್ ಹಿಟ್ ಸಂಸಾರಿಕ ಸಿನಿಮಾಗಳನ್ನ ಕೊಟ್ಟ ಅಂಕಲಗಿ ಇಂದು ಕಾಲು ಮುರಿದುಕೊಂಡು ಮೂಲೆ ಗುಂಪಾಗಿದ್ದಾರೆ. ಆಸ್ಪತ್ರೆ ಖರ್ಚಿಗೆ ಕಾಸಿಲ್ಲ, ಮಗ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಫಿಲಂ ಚೇಂಬರ್ ಮತ್ತು ನಿರ್ಮಾಪಕರ ಸಂಘದಿಂದ ಬಂದ ಸಹಾಯಧನ ಆಸ್ಪತ್ರೆ ಖರ್ಚಿಗೆ ಖಾಲಿಯಾಗಿದೆ. ಈಗ ನಿರ್ಮಾಪಕ ಎಸ್.ಡಿ ಅಂಕಲಗಿ ಕನ್ನಡ ಚಲನಚಿತ್ರ ಅಕಾಡೆಮಿಯ ಸಹಾಯಾಸ್ತದ ನಿರೀಕ್ಷೆಯಲ್ಲಿದ್ದಾರೆ.