ಕಲಬುರಗಿ: ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತಾದ ಅಧಿಕಾರಿಗೆ ಬಡ್ತಿ ನೀಡಿ ಅದೇ ಜಿಲ್ಲೆಗೆ ನೇಮಕ ಮಾಡಲಾಗಿದೆ.
ಆರ್.ಎಸ್ ಬಿರಾದಾರ್ ಈ ಹಿಂದೆ ಕಲಬುರಗಿಯ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಯಾಗಿದ್ದರು. ಸಿಕ್ಕಸಿಕ್ಕಲ್ಲಿ ಲಂಚ ತಿನ್ನೋದು, ವ್ಯಾಪಾರಸ್ಥರನ್ನು ಬೆದರಿಸೋದು ಇವರ ಕೆಲಸ ಆಗಿತ್ತು. ಇಲಾಖೆ ಕೆಲಸ ದುರುಪಯೋಗಪಡಿಸಿಕೊಂಡಿದ್ದಕ್ಕೆ ಹಿಂದಿನ ಆಯುಕ್ತರಾದ ಸುಬೋದ್ ಯಾದವ್ ಇವರನ್ನು ಅಮಾನತು ಮಾಡಿದ್ದರು. ಹೀಗಿದ್ದರೂ ಕುರ್ಚಿ ಬಿಡದ ಬಿರಾದಾರ್ ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ಇಲಾಖೆಗೆ ಅಗೌರವ ತೋರಿಸಿದ್ದರು. ಇಂತಹ ಅಧಿಕಾರಿ ಇದೀಗ ಮತ್ತೆ ಕಲಬುರಗಿ ಜಿಲ್ಲೆಗೆ ಮರುನೇಮಕವಾಗಿ ಬಂದಿದ್ದಾರೆ.
ಈ ಅಧಿಕಾರಿಯ ಹಿಂದಿರೋದು ಇದೇ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಎಂಬ ಅನುಮಾನ ಹುಟ್ಟಿಸಿದೆ. ಅಮಾನತುಗೊಂಡ ಆರ್.ಎಸ್. ಬಿರಾದಾರ್ಗೆ ಮುಂಬಡ್ತಿ ಜೊತೆ ಅದೇ ಜಿಲ್ಲೆಗೆ ನೇಮಕ ಮಾಡಿದ್ದಾರೆ. ಸದ್ಯ ಆರ್.ಎಸ್ ಬಿರಾದಾರ್ ನೇಮಕದಿಂದ ಜಿಲ್ಲೆಯ ವ್ಯಾಪಾರಸ್ಥರಲ್ಲಿ ಅಸಮಾಧಾನ ಮೂಡಿದೆ.