ರಾಜನ್ ನಾಗೇಂದ್ರ ಗೀತೆಗಳಿಗೆ ಹೊಸ ರೂಪ : ರಾಜನ್ ಪುತ್ರ ಘೋಷಣೆ

Public TV
2 Min Read
Rajan Nagendra 1

ನ್ನಡ ಚಿತ್ರರಂಗದ ಹಿರಿಯ ಜನಪ್ರಿಯ ಸಂಗೀತ ನಿರ್ದೇಶಕ (Music Director) ರಾಜನ್ (ರಾಜನ್ ನಾಗೇಂದ್ರ) (Rajan Nagendra) ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು  ಸಂಗೀತಗಾರರನ್ನಾಗಿ ಪರಿಚಯಿಸುವುದಕ್ಕಾಗಿ ‘ಸಪ್ತ ಸ್ವರಾಂಜಲಿ ಇನ್ಸ್ ಟಿಟ್ಯೂಟ್ ಆಫ್ ಮ್ಯೂಸಿಕ್’ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು. ಈ ಸಂಸ್ಥೆಯಲ್ಲಿ ಕಲಿತಿರುವ ಅನೇಕರು ಇಂದು ಸಂಗೀತ ಕ್ಷೇತ್ರದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.  ಈಗ ರಾಜನ್ ಅವರ ಪುತ್ರ ಅನಂತ ರಾಜನ್ (Anantha Rajan), ‘ರಾಜನ್ ನಾಗೇಂದ್ರ ಟ್ರಸ್ಟ್‌ ವತಿಯಿಂದ ರಾಜನ್ ನಾಗೇಂದ್ರ ಅವರ ಗೀತೆಗಳಿಗೆ ಹೊಸರೂಪ ನೀಡಿ ಕೇಳುಗರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ. ಅಂದಹಾಗೆ, ರಾಜನ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಪುತ್ರ ಅನಂತ ರಾಜನ್, ‘ರಾಜನ್ ನಾಗೇಂದ್ರ ಗಾನಯಾನ’ ಎಂಬ ಹೆಸರಿನಲ್ಲಿ ತಮ್ಮ ಯೋಜನೆಯನ್ನು ಘೋಷಿಸಿದ್ದಾರೆ.

Rajan Nagendra 2

‘ಕನ್ನಡದಿಂದ ಸಂಗೀತ ಲೋಕಕ್ಕೆ ಹೊಸ ಪ್ರತಿಭೆಗಳು ಬರಬೇಕು ಎಂಬ ಆಶಯದಿಂದ ನಮ್ಮ ತಂದೆ ರಾಜನ್ ಬದುಕಿರುವಾಗಲೇ ‘ಸಪ್ತ ಸ್ವರಾಂಜಲಿ’ ಎಂಬ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಿಂದ ಈಗಾಗಲೇ ಅನೇಕ ಪ್ರತಿಭೆಗಳು ಕಲಾವಿದರಾಗಿ ಸಂಗೀತ ಲೋಕಕ್ಕೆ ಪರಿಚಯವಾಗಿದ್ದಾರೆ. ಇನ್ನು ಕನ್ನಡ ಸಿನಿಮಾ ಸಂಗೀತದಲ್ಲಿ ರಾಜನ್- ನಾಗೇಂದ್ರ ಅವರ ಹಾಡುಗಳು ಚಿನ್ನ ಇದ್ದಂತೆ. ಹಳೆಯದಾದರೂ ಚಿನ್ನಕ್ಕೆ ಇರುವ ಬೆಲೆ ಇದ್ದೇ ಇರುತ್ತದೆ. ಹಳೆಯ ಚಿನ್ನವನ್ನು ಪಾಲಿಶ್ ಮಾಡಿ ಮತ್ತೆ ಬಳಸುವಂತೆ, ರಾಜನ್ ನಾಗೇಂದ್ರ ಅವರ ಈ ಗೋಲ್ಡನ್ ಹಾಡುಗಳನ್ನು ಇಂದಿನ ಕೇಳುಗರಿಗೆ ಇಷ್ಟವಾಗುವಂತೆ, ಹೊಸ ರೂಪದಲ್ಲಿ ಮತ್ತೆ ತರುತ್ತಿದ್ದೇವೆ’. ‘ನಾನು ನನ್ನ ಶಾಲಾ ದಿನಗಳಿಂದಲೇ ತಂದೆ (ರಾಜನ್) ಅವರ ಬಹುತೇಕ  ಮ್ಯೂಸಿಕ್ ರೆಕಾರ್ಡಿಂಗ್‌ಗಳನ್ನು ಹತ್ತಿರ ದಿಂದ ನೋಡಿದ್ದೆ. ಶಾಲೆಯಿಂದ ನೇರವಾಗಿ ರೆಕಾರ್ಡಿಂಗ್ ಸ್ಟುಡಿಯೋಗೆ ಹೋಗುತ್ತಿದ್ದೆ. ಹಾಗಾಗಿ ಅವರು ಮಾಡಿರುವ ಬಹುತೇಕ ಹಾಡುಗಳ ರೆಕಾರ್ಡಿಂಗ್ ಬಗ್ಗೆ ನನಗೆ ಅರಿವಿದೆ. ತುಂಬ ವೃತ್ತಿಪರವಾಗಿ ರೆಕಾರ್ಡಿಂಗ್ ಕೆಲಸ ಮಾಡುತ್ತಿದ್ದರು ಎಂದರು. ಇದನ್ನೂ ಓದಿ:ಭಾವಿ ಪತ್ನಿ ಜೊತೆಗಿನ ಅಭಿಷೇಕ್ ಅಂಬರೀಶ್ ವೀಡಿಯೋ ವೈರಲ್

Rajan Nagendra 4

‘ತಂದೆ (ರಾಜನ್)ಅವರ ನಿಧನದ ನಂತರ ಅವರ ಕೆಲಸವನ್ನು ಟ್ರಸ್ಟ್‌ ಮೂಲಕ ನಾವು ಮಾಡಲು ಮುಂದಾದೆವು. ಈಗಾಗಲೇ ರಾಜನ್ ನಾಗೇಂದ್ರ ಅವರ ಒಂದಷ್ಟು ಹಳೆಯ ಹಾಡುಗಳಿಗೆ ಹೊಸರೂಪ ಕೊಟ್ಟಿದ್ದೇವೆ. ರಾಜನ್ ಬದುಕಿದ್ದಾಗ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಪ್ರತಿಭೆಗಳಿಗೆ ವರ್ಷಕ್ಕೆ ಮೂರು ನಾಲ್ಕು ಕಾರ್ಯಕ್ರಮಗಳ ಮೂಲಕ ಅವರನ್ನು ಸಂಗೀತ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದರು. ಅದನ್ನು ಮುಂದುವರೆಸುವ ಕೆಲಸ ಟ್ರಸ್ಟ್‌ ಮೂಲಕ ನಾವು ಮಾಡುತ್ತಿದ್ದೇವೆ’ ಎಂದು ರಾಜನ್ ಅವರ ಮಗ ಅನಂತ ರಾಜನ್ ತಿಳಿಸಿದರು.

Rajan Nagendra 3

ಹಿರಿಯ ಚಿತ್ರ ನಿರ್ದೇಶಕ ಭಾರ್ಗವ ಮಾತನಾಡಿ, ‘ರಾಜನ್ ನಾಗೇಂದ್ರ ನನ್ನ ನಿರ್ದೇಶನದ 26 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸುಮಾರು 38 ಸಿನಿಮಾಗಳಿಗೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗದ ತುಂಬಾ ಅಪರೂಪದ ಸದಭಿರುಚಿ ಸಂಗೀತ ನಿರ್ದೇಶಕರಲ್ಲಿ ರಾಜನ್ ನಾಗೇಂದ್ರ ಜೋಡಿ ಕೂಡ ಒಂದು.  ಕೆಲಸದಲ್ಲಿ ದೊಡ್ಡ ಮಟ್ಟಕ್ಕೆ ಏರಿದವರು ರಾಜನ್. ಇಂದಿಗೂ ಪ್ರತಿದಿನ ಅವರ ಹಾಡುಗಳನ್ನು ಕೇಳುಗರು ಗುನುಗುತ್ತಿರುವುದೇ ಅವರ ಹಾಡುಗಳ ಜನಪ್ರಿಯತೆಗೆ ದೊಡ್ಡ ಸಾಕ್ಷಿ ಎಂದರು. ಗುರುದತ್, ಲಹರಿ ವೇಲು (Lahari Velu) ಮೊದಲಾದವರು ರಾಜನ್ ನಾಗೇಂದ್ರ ಹಾಡುಗಳ ಕುರಿತು ಮಾತನಾಡಿದರು. ಸಿಂಚನಾ, ಭೂಮಿಕಾ, ಸ್ಮಿತಾ, ಕೀರ್ತನಾ, ವಿಷ್ಣು ಮೊದಲಾದ ಕಲಾವಿದರು ರಾಜನ್ ನಾಗೇಂದ್ರ ಅವರ ಕೆಲ ಹಾಡುಗಳನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಿದರು.

Share This Article