ಚಿಕ್ಕಮಗಳೂರು: ಒಂಬತ್ತು ತಿಂಗಳ ಹಿಂದೆ ಸೋಲನ್ನು ಅನುಭವಿಸಿರುವ ಎ. ಮಂಜು ಅಧಿಕಾರವಿಲ್ಲದೇ ನೀರಿನಿಂದ ತೆಗೆದ ಮೀನಿನಂತಾಗಿ, ಈಗ ಅಧಿಕಾರ ಹಾಗೂ ಹಣಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.
ಕಡೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೇರಿದ ಎ. ಮಂಜು ನಾಳೆ ನಿಮ್ಮ ಮನೆಗೆ ಬಂದರೂ ಆಶ್ಚರ್ಯವಿಲ್ಲ. ಮಂಜು ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ ಎಂದು ಅರಕಲಗೂಡು ಜನರೇ ಹೇಳುತ್ತಿದ್ದಾರೆ. ಮೇ 23ರಂದು ಅವರು ಮತ್ತೆ ಮನೆಗೆ ಹೋಗುತ್ತಾರೆ. ಆಗ ಅವರು ಮತ್ತೆ ಬಿಎಸ್ವೈ ಬಿಟ್ಟು ಬೇರೆ ಪಕ್ಷ ನೋಡುತ್ತಾರೆ ಎಂದು ಭವಿಷ್ಯ ನುಡಿದರು.
ಸದಾ ಅಭಿವೃದ್ಧಿ ರಾಜಕಾರಣಕ್ಕೆ ಹೆಸರಾಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈಗ ಜಾತಿ ರಾಜಕಾರಣವೂ ಆರಂಭವಾಗಿದೆ. ಎ.ಮಂಜು ಅವರು ಎಷ್ಟು ವೀರಶೈವ ನಾಯಕರನ್ನು ಬೆಳೆಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಮಗೆ ವೀರಶೈವರ ಮೇಲೆ ಪ್ರೀತಿ ಇಲ್ಲವೇ ಪ್ರೀತಿ ಇಲ್ಲದೆ ಬೇಲೂರಿನಲ್ಲಿ ಕ್ಷೇತ್ರ ತ್ಯಾಗ ಮಾಡಿ ಲಿಂಗೇಶ್ರನ್ನು ಗೆಲ್ಲಿಸಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಜೀವನ ಪೂರ್ತಿ ವೀರಶೈವರನ್ನು ತುಳಿದವರು ಈಗ ಬಿಜೆಪಿ ಸೇರಿದ್ದೇನೆ ಎಂದು ಹೇಳಿ ಯಾವ ನೈತಿಕತೆ ಇಟ್ಟುಕೊಂಡು ವೀರಶೈವರ ಮತ ಕೇಳ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಪ್ರಜ್ವಲ್ ರೇವಣ್ಣ ಎ. ಮಂಜು ವಿರುದ್ಧ ವಾಗ್ಧಾಳಿ ನಡೆಸಿದರು.