ಬೆಂಗಳೂರು: ಜಾತ್ರೆಗೆಂದು ಸ್ನೇಹಿತನ ಮನೆಗೆ ಹೋದ ವ್ಯಕ್ತಿ ಗ್ರಾಮದ ಹೊರವಲಯದ ಮೋರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೆದ್ದಲಹಳ್ಳಿ ಗ್ರಾಮದ ರವಿಕುಮಾರ್ ಮೃತ ದರ್ದೈವಿ.
ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವಿಕುಮಾರ್, ಬುಧವಾರ ತೊರೆ ಕೆಂಪೋಹಳ್ಳಿಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ತನ್ನ ಗೆಳೆಯರೊಂದಿಗೆ ಬಂದಿದ್ದರು ಎನ್ನಲಾಗಿದೆ. ಬಳಿಕ ರವಿಕುಮಾರ್ ಮೃತ ದೇಹ ರಸ್ತೆಯ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ.
ಈ ದೃಶ್ಯವನ್ನು ಕಂಡು ಮೃತನ ಕುಟುಂಬದವರ ರೋಧನ ಮುಗಿಲುಮುಟ್ಟಿತ್ತು. ಊರಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಜಾತ್ರೆಗೆಂದು ಸ್ನೇಹಿತನ ಮನೆಗೆ ಹೋಗುತ್ತೇನೆ ಅಂತ ಹೇಳಿ ಹೋಗಿದ್ದರು. ಆದರೆ ವೈಯಕ್ತಿಕವಾಗಿ ಯಾವುದೇ ವೈಷ್ಯಮ್ಯ ಯಾರ ಮೇಲೂ ಇರಲಿಲ್ಲ. ಈ ಘಟನೆಗೆ ಕಾರಣವೇನೆಂದು ತಿಳಿಯುತ್ತಿಲ್ಲ. ಮನೆಯ ಯಜಮಾನನ್ನೇ ಕಳೆದುಕೊಂಡ ಮೇಲೆ ನಮ್ಮ ಕುಟುಂಬ ಇದೀಗ ಬೀದಿಗೆ ಬಿದ್ದಂತಾಗಿದೆ ಎಂದು ಮೃತ ರವಿಕುಮಾರ್ ಪತ್ನಿ ಜಯಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.