ತುಮಕೂರು: ವ್ಯಕ್ತಿಯೊಬ್ಬ ಮನೆ ನೀಡುವಂತೆ ಒತ್ತಾಯಿಸಿ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳಗ್ಗೆ 10 ಗಂಟೆಗೆ ಗ್ರಾಮದ ಸಮೀಪವೇ ಹಾದುಹೋಗಿರುವ ಹೈಟೆನ್ಷನ್ ಕಂಬವನ್ನು ಏರಿದ ಶ್ರೀನಿವಾಸ್ ನನಗೆ ಸರ್ಕಾರದಿಂದ ಮನೆ ಹಾಗೂ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮತ್ತು ಸರ್ಕಾರದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಹೈಟೆನ್ಷನ್ ಕಂಬದ ಅರ್ಧ ಭಾಗದಲ್ಲಿ ಕುಳಿತು ನನಗೆ ಮನೆ ನೀಡಬೇಕು. ಗುಬ್ಬಿ ತಹಶೀಲ್ದಾರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದಿದ್ದಾರೆ. ಶ್ರೀನಿವಾಸ್ ಹೈಟೆನ್ಷನ್ ಕಂಬದ ಮೇಲೆ ಕುಳಿತಿರುವುದನ್ನು ನೋಡಲು ಹೊಸಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೆಲವರು ಕೆಳಗೆ ಇಳಿಯುವಂತೆ ಮಾಡಿದ ಮನವಿಗೆ ಶ್ರೀನಿವಾಸ್ ಕಿಮ್ಮತ್ತು ನೀಡಲಿಲ್ಲ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್
ಹೈಟೆನ್ಷನ್ ಕಂಬ ಏರಿ ಕುಳಿತಿರುವ ವಿಷಯವನ್ನು ತಿಳಿದ ತಹಶೀಲ್ದಾರ್ ಆರತಿ, ಸಿಪಿಐ ನದಾಫ್ ಸ್ಥಳಕ್ಕೆ ಬಂದು ಶ್ರೀನಿವಾಸ್ ಅವರ ಮನವೊಲಿಸಿದರು. ಅಧಿಕಾರಿಗಳಿಂದ ಸಕಾರಾತ್ಮಕ ಭರವಸೆ ಸಿಕ್ಕಿದ ನಂತರ ಶ್ರೀನಿವಾಸ್ ಕೆಳಗೆ ಇಳಿದರು. ಶ್ರೀನಿವಾಸ್ ಹೈಟೆನ್ಷನ್ ಕಂಬ ಏರಿರುವುದನ್ನು ನೂರಾರು ಮಂದಿ ಕುತೂಹಲದಿಂದ ವೀಕ್ಷಿಸಿದರು. ಅಧಿಕಾರಿಗಳ ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ. ಇದನ್ನೂ ಓದಿ: ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ