ಕಾರವಾರ: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುತ್ತಾರ್ನಲ್ಲಿ ನಡೆದಿದೆ.
ತ್ಯಾಗರಾಜ ಗಣಪತಿ ಮುಕ್ರಿ (30) ಕೊಲೆಯಾದ ಸಹೋದರನಾಗಿದ್ದು, ಶಿವರಾಜ ಗಣಪತಿ ಮುಕ್ರಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಮದ್ಯ ಸೇವಿಸಿ ಬಂದಿದ್ದ ಶಿವರಾಜ್ ಮನೆಯಲ್ಲಿ ಗಲಾಟೆ ತೆಗೆದಿದ್ದು, ಈ ವೇಳೆ ಮನೆಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಹಾಕಿದ್ದ. ಯಾಕೆ ಹೀಗೆ ಗಲಾಟೆ ಮಾಡುತ್ತೀಯ ಕಾರಿನ ಗಾಜು ಒಡೆದಿದ್ದು ಏಕೆ ಎಂದು ಅಣ್ಣ ಗಣಪತಿ ಮುಕ್ರಿ ಕೇಳಿದ್ದಾನೆ.
ಇದಕ್ಕೆ ಸಿಟ್ಟಾದ ಶಿವರಾಜ್ ಅಲ್ಲೇ ಇದ್ದ ಸುತ್ತಿಗೆಯನ್ನು ಬೀಸಿ ಅಣ್ಣನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ತ್ಯಾಗರಾಜನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರ್ಕಾರಿ ಆಸ್ಪತ್ರೆಯಲ್ಲಿ ತ್ಯಾಗರಾಜ ಮೃತಪಟ್ಟಿದ್ದಾನೆ. ಇನ್ನು ಗಲಾಟೆ ತಪ್ಪಿಸಲು ಬಂದ ತ್ಯಾಗರಾಜು ಪತ್ನಿ ಹೇಮಾವತಿ ಮುಕ್ರಿ ಹಾಗೂ ರೋಹಿತ ಮಂಜುನಾಥ ಮುಕ್ರಿ ಮೇಲೂ ಶಿವರಾಜ ಹಲ್ಲೆ ನಡೆಸಿದ್ದಾನೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.