ದಾವಣಗೆರೆ: ಪತ್ನಿ ಸಾವಿನಿಂದ ಬೇಸತ್ತ ಪತಿ ತನ್ನ ಎರಡು ಮಕ್ಕಳನ್ನು ಕುತ್ತಿಗೆ ಹಿಸುಕಿ ಸಾಯಿಸಿ ತಾನು ಕೂಡ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ದಾವಣಗೆರೆ ನಗರದ ಎಸ್ಪಿಎಸ್ ನಗರದ ಪಕ್ಕದಲ್ಲಿರುವ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ.
ಉದಯ್ (32) ಮಕ್ಕಳನ್ನು ಕೊಲೆ ಮಾಡಿ ತಾನು ನೇಣು ಬಿಗಿದುಕೊಂಡ ವ್ಯಕ್ತಿ. ಸಿಂಧುಶ್ರೀ (04) ಹಾಗೂ ಶ್ರೀಜಯ್ (03) ತಂದೆಯ ಕೈಯಿಂದಲೇ ಸಾವನ್ನಪ್ಪಿದ ಮಕ್ಕಳು.
ಕಳೆದ ಎಂಟು ತಿಂಗಳ ಹಿಂದೆ ಉದಯ್ ಅವರ ಪತ್ನಿ ಹೇಮಾ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯನ್ನು ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಉದಯ್ ಇಂದು ಸಂಜೆ ಇಬ್ಬರು ಮಕ್ಕಳ ಕುತ್ತಿಗೆ ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ಚಳಗೇರೆ ಗ್ರಾಮದ ಹೇಮಾ ಹಾಗೂ ಉದಯ್ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹೇಮಾ ಸಾವಿನ ನಂತರ ಉದಯ್ ಖಿನ್ನತೆಗೆ ಒಳಗಾಗಿದ್ದರು. ಆರ್ಎಸ್ಎಸ್ ಶಾಖೆಗೆಳಿಗೆ ಹೋಗುತ್ತಿದ್ದ ಉದಯ್ಗೆ ಇತ್ತೀಚಿಗೆ ಆರ್ಎಸ್ಎಸ್ ಮುಖಂಡರನ್ನ ಕರೆಯಿಸಿ ಬುದ್ದಿವಾದ ಹೇಳಿಸಲಾಗಿತ್ತು. ರಕ್ತದಲ್ಲಿ ಐ ಲವ್ ಯು ಹೇಮಾ ಎಂದು ಪತ್ನಿಯ ಹೆಸರನ್ನು ಗೋಡೆ ಮೇಲೆ ಬರೆದಿದ್ದ. ನಂತರ ಏಳು ಪುಟಗಳ ಪತ್ರ ಬರೆದಿಟ್ಟು, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.