ಬೆಂಗಳೂರು: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ದೊಡ್ಡಪ್ಪನ ಮಗನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಈಜೀಪುರದಲ್ಲಿ ನಡೆದಿದೆ.
ಆಟೋ ಚಾಲಕನಾಗಿರೋ ಮುನಿರಾಜು ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ನಡೆಸಿರುವ ರಾಮಮೂರ್ತಿ ಮತ್ತು ಹಲ್ಲೆಗೊಳಗಾಗಿರೊ ಮುನಿರಾಜು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ಇಬ್ಬರ ನಡುವೆ ಜಮೀನು ಒಂದರ ವಿಚಾರವಾಗಿ ವಿವಾದವಿದ್ದು, ಅದು ಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ.
ಈ ಮಧ್ಯೆ ಮುನಿರಾಜು ಇತ್ತೀಚಿಗೆ ಜಮೀನನ್ನು ಮಾರಾಟ ಮಾಡಿದ್ದಾನೆ. ಇದನ್ನು ಪ್ರಶ್ನಿಸಿ ರಾಮಮೂರ್ತಿ ಮಂಗಳವಾರ ಸಂಜೆ ಮುನಿರಾಜು ಮನೆಗೆ ಬಂದಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಅದು ತಾರಕಕ್ಕೇರಿದೆ. ಆಗ ಕೋಪಗೊಂಡ ರಾಮಮೂರ್ತಿ ಮಚ್ಚಿನಿಂದ ಮುನಿರಾಜು ತಲೆಗೆ ಏಳು ಬಾರಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ, ಎಸ್ಕೇಪ್ ಆಗಿದ್ದಾನೆ.
ಘಟನೆಯಿಂದ ಗಂಭೀರ ಗಾಯಗೊಂಡು ಮುನಿರಾಜುನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿ ವಿವೇಕನಗರ ಪೊಲೀಸರು ಆರೋಪಿ ರಾಮಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.