ನೆಲಮಂಗಲ: ಇವರು ಹುಟ್ಟು ವಿಕಲಚೇತನ. ಎರಡೂ ಕಾಲು ಹಾಗೂ ಸೊಂಟದ ಸ್ವಾಧೀನ ಇಲ್ಲ. ಆದರೆ ಅಂಗವಿಕಲತೆ ಸಮಾಜ ಸೇವೆ ಮಾಡೋದಕ್ಕೆ ಯಾವತ್ತೂ ಅಡ್ಡಿಯಾಗಿಲ್ಲ. ತೆವಳಿಕೊಂಡೇ ಓಡಾಡುತ್ತಾ ಸಮಾಜಸೇವೆ ಮಾಡೋ ನೆಲಮಂಗಲದ ಗಂಗಾಧರ್ ನಮ್ಮ ಪಬ್ಲಿಕ್ ಹೀರೋ.
ಹೀಗೆ ರಸ್ತೆಯಲ್ಲಿ ತೆವಳಿಕೊಂಡು ತನ್ನ ದಿನನಿತ್ಯದ ಕೆಲಸದಲ್ಲಿ ತೊಡಗಿರುವ ಈ ಯುವಕನ ಹೆಸರು ಗಂಗಾಧರ. 7ನೇ ತರಗತಿಯವರೆಗೆ ಓದಿದ್ದಾರೆ. ಆದರೆ ಪೊಲಿಯೋ ಅಟ್ಯಾಕ್ ಆಗಿ ಕಾಲು, ಹಾಗೂ ಸೊಂಟದ ಸ್ವಾಧೀನ ಇಲ್ಲ. ಮೂಲತಃ ಆಂಧ್ರ್ರದವರು ಆದರೆ ಅಪ್ಪಟ ಕನ್ನಡಿಗ. ಬೆಂಗಳೂರು ಹೊರವಲಯ ನೆಲಮಂಗಲದ ಚನ್ನಪ್ಪ ಕಲ್ಯಾಣಿಯ ನಿವಾಸಿ. ಯಾರು ಯಾವುದೇ ಕೆಲಸ ಹೇಳಿದ್ದರು ಚಾಚುತಪ್ಪದೇ ಮಾಡುತ್ತಾರೆ.
ಜೀವನೋಪಾಯಕ್ಕಾಗಿ ವಾಟರ್ ಟ್ಯಾಂಕ್ ಹಾಗೂ ನೀರಿನ ಸಂಪ್ ಕ್ಲೀನ್ ಮಾಡಿಸುತ್ತಾರೆ. ಇವರ ಜೊತೆ 8 ಮಂದಿ ಯುವಕರ ತಂಡವಿದೆ. ಗಂಗಾಧರ್ ಅವರಿಗೆ ಬಡವರಿಗೆ, ಅಸಹಾಯಕರಿಗೆ, ಅವಿದ್ಯಾವಂತರಿಗೆ ಏನಾದರೂ ಸಹಾಯ ಮಾಡೋ ದೊಡ್ಡ ಮನಸ್ಸಿದೆ. ಹೀಗಾಗಿ ತಾಲೂಕು ಕಚೇರಿಯಲ್ಲಿ ಜನರಿಗೆ ಸಿಗಬೇಕಾದ ಪಾಣಿ, ಮುಟೇಷನ್ಗಳನ್ನು ಕೊಡಿಸುತ್ತಾರೆ. ವಿಧವಾ ವೇತನ, ವಿಕಲಚೇತನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕೊಡಿಸಲು ಸಹಾಯ ಮಾಡುತ್ತಾರೆ.
ಒಟ್ಟಾರೆ ದುಡಿದು ಜೀವನ ನಡೆಸುವ ಹಂಬಲದಲ್ಲಿರುವ ಗಂಗಾಧರ್ ಯಾರ ಮುಂದೆನೂ ಕೈ ಚಾಚಿಲ್ಲ. ಇವರ ಸ್ವಾಭಿಮಾನ, ಛಲ ಬದುಕು ಕಟ್ಟಿಕೊಂಡ ಪರಿ ಇತರೆ ವಿಕಲಚೇತನರಿಗೆ ಮಾದರಿಯಾಗಿದೆ.