ವಿಜಯಪುರ: ಆಟೋದಲ್ಲಿ ಹಾಡು ಹಾಕಿದ್ದಕ್ಕೆ ತಡರಾತ್ರಿ ಯುವಕರ ಗುಂಪೊಂದು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಆಟೋ ಚಾಲಕ ಭೀಮಾತೀರದ ಹಂತಕ ಧರ್ಮರಾಜ ಚಡಚಣ ಬೆಂಬಲಿಗ ಬಾಬು ಬಿರಾದಾರ್ ಎಂದು ಹೇಳಲಾಗಿದೆ. ರಫೀಕ್ ಇನಾಮದಾರ್, ಪುಟ್ಟು ಹಡಪದ, ಮುಬಾರಕ್ ಮತ್ತು ರಾಜು ಎಂಬವರು ಹಲ್ಲೆ ಮಾಡಿದ್ದಾರೆಂದು ಬಾಬು ಬಿರಾದಾರ್ ಆರೋಪ ಮಾಡಿದ್ದಾರೆ.
ಏನಿದು ಘಟನೆ?
ತಡರಾತ್ರಿ ಗಾಂಧಿ ನಗರದಲ್ಲಿ ಆಟೋದಲ್ಲಿ ಭೀಮಾತೀರದ ಹಂತಕ ಧರ್ಮರಾಜ ಚಡಚಣಗೆ ಸಂಬಂಧಿಸಿದ್ದ ಹಾಡನ್ನು ಹಾಕಿಕೊಂಡು ಬಾಬೂ ಬಿರಾದಾರ್ ಹೊರಟಿದ್ದರು. ಈ ವೇಳೆ ಆಟೋವನ್ನು ಅಡ್ಡಗಟ್ಟಿದ ಯುವಕರು ಗುಂಪು ಕ್ಯಾತೆ ತೆಗೆದು ಹಾಡು ಹಾಕಿದರೆ ಧರ್ಮರಾಜ ಹಾಗೂ ಗಂಗಾಧರ ಚಡಚಣನಿಗೆ ಬಂದ ಗತಿ ನಿನಗೂ ಬರುತ್ತೆ ಎಂದು ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಬಾಬು ಬಿರಾದಾರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಂದು ಬಿರಾದಾರ್ ದೂರು ದಾಖಲಿಸಲು ಮುಂದಾಗಿದ್ದಾರೆ.