ಲಕ್ನೋ: ರೈಲ್ವೆ ಮತ್ತು ಬ್ಯಾಂಕ್ಗಳ ಖಾಸಗೀಕರಣ ವಿಚಾರವಾಗಿ ತಮ್ಮ ಪಕ್ಷದ ಕೇಂದ್ರ ಸರ್ಕಾರದ ಬಿಜೆಪಿ ಸಂಸದ ವರುಣ್ ಗಾಂಧಿ ಹರಿಹಾಯ್ದಿದ್ದಾರೆ.
ತಾನು ಪ್ರತಿನಿಧಿಸುವ ಪಕ್ಷದ ವಿರುದ್ಧವೇ ಟ್ವೀಟ್ ಮಾಡಿ ವರುಣ್ ಗಾಂಧಿ ಚಾಟಿ ಬೀಸಿದ್ದಾರೆ. ಬ್ಯಾಂಕ್ ಮತ್ತು ರೈಲ್ವೆ ಖಾಸಗೀಕರಣದಿಂದ ಅಪಾರ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯ
ಬ್ಯಾಂಕ್, ರೈಲ್ವೆ ಖಾಸಗೀಕರಣವಾದರೆ ಸುಮಾರು 5 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇದರಿಂದ ಲಕ್ಷಾಂತರ ಕುಟುಂಬಗಳ ಬದುಕು ಬೀದಿ ಪಾಲಾಗಲಿದೆ. ಯಾವುದೇ ಸರ್ಕಾರ ಜನರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸಬೇಕೇ ಹೊರತು ಬಂಡವಾಳಶಾಹಿಗಳನ್ನು ಬೆಳೆಸುವುದಲ್ಲ ಎಂದು ಟ್ವೀಟ್ ಮಾಡಿ ಕೇಂದ್ರ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಕಳೆದ ವಾರವೂ ಸರ್ಕಾರದ ವಿರುದ್ಧ ವರುಣ್ ಗಾಂಧಿ ಟ್ವೀಟ್ ಮಾಡಿದ್ದರು. ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಹಣಕಾಸು ವಂಚನೆ ಆಗುತ್ತಿದೆ. ವಿಜಯ್ ಮಲ್ಯ- 9,000 ಕೋಟಿ, ನೀರವ್ ಮೋದಿ- 14,000 ಕೋಟಿ, ರಿಶಿ ಅಗರ್ವಾಲ್-23,000 ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಆದರೆ ದೇಶದಲ್ಲಿ ಸಾಲದ ಹೊರೆಯಿಂದಾಗಿ ದಿನಕ್ಕೆ 14 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟ ವ್ಯವಸ್ಥೆ ಕೊನೆಗಾಣಿಸಲು ಸರ್ಕಾರ ಬಲಿಷ್ಠವಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಐದು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ: ಪೃಥ್ವಿರಾಜ್ ಚವಾಣ್
2020ರಲ್ಲಿ ರೈಲ್ವೆಗೆ ಖಾಸಗೀ ಪಾಲುದಾರರನ್ನು ಆಹ್ವಾನಿಸಿದ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ಅನೇಕ ನಾಯಕರು ಪ್ರತಿರೋಧ ವ್ಯಕ್ತಪಡಿಸಿದ್ದರು. 10 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿರುವ ಭಾರತೀಯ ರೈಲ್ವೆ ವಲಯ ವಿಶ್ವದಲ್ಲೇ ಹೆಸರಾಗಿದೆ.
ವಿಪಕ್ಷಗಳ ಟೀಕೆಯನ್ನು ಕೇಂದ್ರ ಸಚಿವ ಪೀಯುಷ್ ಗೋಯಲ್ ತಳ್ಳಿಹಾಕಿದ್ದರು. ರೈಲ್ವೆ ಖಾಸಗೀಕರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದರು.