ಬೆಂಗಳೂರು: ಅದೊಂದು ಖತಾರ್ನಾಕ್ ಗ್ಯಾಂಗ್. ದುಡ್ಡು ಸಿಗುತ್ತೆ ಎಂದರೆ ಯಾರಿಗೆ ಬೇಕಾದರೂ ಚಾಕು ಹಾಕುತ್ತಿದ್ರು. ಅದೇ ರೀತಿ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಂದ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿನ ಕಮ್ಮನಹಳ್ಳಿ ಜಂಕ್ಷನ್ ನಲ್ಲಿ ತಡರಾತ್ರಿ ಗ್ಯಾಂಗ್ ವೊಂದು ದರೋಡೆಗೆ ಕಾದು ಕುಳಿತಿತ್ತು. ಅದೇ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಅಸ್ಸಾಂ ಮೂಲದ ಸಂಜಯ್ ಮನ್ಸೂರ್ ಮೇಲೆ ಆ ಗ್ಯಾಂಗ್ ದಾಳಿ ಮಾಡಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ ಸಂಜಯ್ ಗೆ ಚಾಕು ಇರಿದು ಕೊಂದುಬಿಟ್ಟರು.
ಸಂಜಯ್ ಗೆ ಚಾಕು ಇರಿದು ಕೊಂದ ಗ್ಯಾಂಗ್ ಗೆ ಸಿಕ್ಕಿದ್ದು ಕೇವಲ 150 ರೂಪಾಯಿ. ಇದೇ ವೇಳೆ ಆ ರಸ್ತೆಯಲ್ಲಿ ಬಂದ ಟೆಕ್ಕಿಯೊಬ್ಬರಿಂದಲೂ ಹಣ ದೋಚಿ ಪರಾರಿಯಾಗಿದ್ದ ಈ ತಂಡವನ್ನ 4 ತಿಂಗಳ ಬಳಿಕ ಬಾಣಸವಾಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಈ ಗ್ಯಾಂಗ್ ನಗರದಲ್ಲಿ 20ಕ್ಕೂ ಹೆಚ್ಚು ದರೋಡೆ ಮಾಡಿರೋದು ಬೆಳಕಿಗೆ ಬಂದಿದೆ.