ಕೊಪ್ಪಳ: ರಾಜ್ಯದಲ್ಲಿ ಗಣೇಶ ಹಬ್ಬದ (Ganesha Festival) ಸಂಭ್ರಮ ಮನೆ ಮಾಡಿದೆ. ಈ ನಡುವೆ ಕೊಪ್ಪಳದಲ್ಲಿ ಮಸೀದಿ ಆವರಣದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕರು ಭಾವೈಕ್ಯತೆ ಸಂದೇಶ ಸಾರಿದ್ದಾರೆ.
ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು (Hindu Muslim) ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ. ಇದನ್ನೂ ಓದಿ: Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು
ಕಳೆದ ಮೂರು ವರ್ಷಗಳಿಂದ ಇಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಜನ ಒಟ್ಟಿಗೆ ಸೇರಿ ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಾ ಬರುತ್ತಿದ್ದಾರೆ. ಮುಸ್ಲಿಂ ಬಾಂಧವರೇ 5 ದಿನಗಳ ಕಾಲ ಪೂಜಾ ಕೈಂಕರ್ಯವನ್ನು ನೆರವೇರಿಸಲಿದ್ದಾರೆ. ಗಣೇಶ ವಿಸರ್ಜನೆಗೂ ಮುನ್ನಾ ದಿನ ಅನ್ನಸಂತರ್ಪಣೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!
ಬೆಳಗಾವಿ: 2.21 ಲಕ್ಷ ಹುಣಸೆ ಬೀಜ ಬಳಸಿ ಮೂರ್ತಿ ತಯಾರು
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಬೆಳಗಾವಿ ಹಳೇ ಗಾಂಧಿನಗರದ ಸೃಜನಶೀಲ ಶಿಲ್ಪಿ ಸುನೀಲ್ ಸಿದ್ದಪ್ಪ ಆನಂದಚೆ ಈ ವರ್ಷ 2,21,111 ಹುಣಸೆ ಬೀಜಗಳನ್ನು ಬಳಸಿ ಭವ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚಿಸಿದ್ದು ವಿಶೇಷ ಆಕರ್ಷಣೆಗೆ ಕಾರಣವಾಗಿದೆ. ಸುನೀಲ್, ಕಳೆದ ಅನೇಕ ವರ್ಷಗಳಿಂದ ಜೇಡಿ ಮಣ್ಣು, ಹುಲ್ಲಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ವರ್ಷ ಮತ್ತೊಂದು ಹೆಜ್ಜೆ ಮುಂದಿಟ್ಟು ಮರುಬಳಕೆಯ ದಿನಪತ್ರಿಕೆಗಳು ಮತ್ತು ಕಾರ್ಡ್ಬೋರ್ಡ್, ಹುಲ್ಲಿನ ಸಹಾಯದಿಂದ ಹೆರಳವಾದ ಹುಣಸೆ ಬೀಜಗಳನ್ನು ಉಪಯೋಗಿಸಿ 8 ಅಡಿ ಎತ್ತರದ ಗಣೇಶ ಮುರ್ತಿ ನಿರ್ಮಿಸಿದ್ದಾರೆ.
ದಿನ ನಿತ್ಯದ ತನ್ನ ಇತರೆ ಕೆಲಸಗಳ ಮಧ್ಯ ಒಂದೆರಡು ಗಂಟೆ ಬಿಡುವ ಮಾಡಿಕೊಂಡು ಮನೆಯವರ ಹಾಗೂ ಇತರರ ಸಹಕಾರಿಂದ ಒಂದು ತಿಂಗಳು ಕಾಲಾವಧಿಯಲ್ಲಿ ಸಾರ್ವಜನಿಕ ವೇದಿಕೆಯ ಭವ್ಯ ಮೂರ್ತಿ ನಿರ್ಮಿಸಿದ್ದಾರೆ. ಇಂತಹ ಮೂರ್ತಿಗಳ ಬೇಡಿಕೆ ಹೆಚ್ಚಿದ್ದರೂ ಬಿಡುವಿಲ್ಲದ ಕಾರಣ ಪ್ರತಿವರ್ಷ ಒಂದು ಮಾತ್ರ ಮೂರ್ತಿ ರಚಿಸುತ್ತಿದ್ದಾರೆ. ಪರಿಸರ ಸ್ನೇಹಿ ಈ ವರ್ಷದ ಸುಂದರ ಮೂರ್ತಿಯನ್ನು ಬೆಳಗಾವಿ ಮಾಳಿಗಲ್ಲಿ ಪರಿಸರ ಸ್ನೇಹಿ ಯುವಕರು ಸೇರಿ ತಮ್ಮ ಓಣಿಯಲ್ಲಿ ಪ್ರತಿಷ್ಠಾಣೆ ಮಾಡಿ ಪರಿಸರ ಕಾಳಜಿ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ