ದಾವಣಗೆರೆ: ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಚಿತ್ರದ ಯಶಸ್ಸಿಗಾಗಿ ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಹರಕೆ ಸಲ್ಲಿಸಿದ್ದಾರೆ.
ಹೌದು. ವಿಜಿ ಅಭಿಮಾನಿಯೊಬ್ಬರು ಮೊಣಕಾಲಿನಲ್ಲೇ ನಡೆಯುವ ಮೂಲಕ ನೆರೆದವರಿಗೆ ಅಚ್ಚರಿ ಮೂಡಿಸಿದ್ದಾರೆ. ದುನಿಯಾ ವಿಜಯ್ ಅಭಿಮಾನಿ ಬಳಗದ ಅಧ್ಯಕ್ಷ ದೊಡ್ಡೇಶ ಈ ವಿಶಿಷ್ಟ ಹರಕೆ ಸಲ್ಲಿಸಿದ್ದಾರೆ.
ದಾವಣಗೆರೆ ನಗರದ ಅಶೋಕ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹೀಗಾಗಿ ದೊಡ್ಡೇಶ ಅವರು ಅರುಣಾ ಚಿತ್ರಮಂದಿರದಿಂದ ಲಿಂಗೇಶ್ವರ ದೇವಸ್ಥಾನದವರೆಗೆ ಸುಮಾರು 500 ಮೀಟರ್ ದೂರ ಮೊಣಕಾಲಿನಲ್ಲಿಯೇ ನಡೆದು ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು. ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸುತ್ತಿದ್ದಾರೆ.
ಬೆಂಗಳೂರಿನ ಗೌಡನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮಾಸ್ತಿಗುಡಿ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಸಿನಿಮಾ ನೋಡಲು ಉದಯ್ ತಂದೆ ವೆಂಕಟೇಶ್, ತಾಯಿ ಕೌಸಲ್ಯ ಮತ್ತು ಉದಯ್ ಸಹೋದರ ಬಂದಿದ್ದಾರೆ. ಇದೇ ವೇಳೆ ಮಾತನಾಡಿದ ಉದಯ್ ತಂದೆ-ತಾಯಿ, ಉದಯ್ ಅಭಿನಯದ ಕೊನೆ ಸಿನಿಮಾ ಇದು. ಹಾಗಾಗಿ ಚಿತ್ರಮಂದಿರದಲ್ಲಿ ನೋಡೋಕೆ ಬಂದ್ವಿ ಅಂದ್ರು. ಇನ್ನು ಕ್ಲೈಮ್ಯಾಕ್ಸ್ ದುರಂತದಲ್ಲಿ ಬಲಿಯಾದ ಅನಿಲ್ ಮತ್ತು ವಿಜಯ್ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿದೆ ಮಾಸ್ತಿ ಚಿತ್ರತಂಡ.