ಕಾರವಾರ: ನಗರದ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಬೇಹುಗಾರಿಕೆ ಆತಂಕ ಸೃಷ್ಠಿಸಿದ್ದ ಜಿ.ಪಿ.ಎಸ್ ಟ್ರಾನ್ಸ್ಮೀಟರ್, ಟ್ಯಾಗ್ ಹೊಂದಿದ್ದ ರಣಹದ್ದಿನ ರಹಸ್ಯ ಕೊನೆಗೂ ಬಯಲಾಗಿದೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ (Karwar) ಕದಂಬ ನೌಕಾನೆಲೆಯ ವ್ಯಾಪ್ತಿಯಲ್ಲಿ ಈ ಹಿಂದೆ ರಾತ್ರಿ ವೇಳೆ ಡ್ರೋನ್ ಕ್ಯಾಮೆರಾ ಬಳಸಿ ನೌಕಾನೆಲೆಯ ಚಿತ್ರಗಳನ್ನು ಆಗುಂತಕರು ಸೆರೆಹಿಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕೋಡಿಭಾಗ್ನ ನದಿಭಾಗ್ ನೌಕಾನೆಲೆ ಸರಹದ್ದು ಸುತ್ತಲೂ ಹಾರಾಡುತ್ತಿದ್ದ ರಣಹದ್ದು ಬೆನ್ನಲ್ಲೇ ಟ್ರ್ಯಾಕರ್ ಅಳವಡಿಸಲಾಗಿರುವುದು ಪತ್ತೆಯಾಗಿತ್ತು. ಇದೀಗ ಅದರ ಸತ್ಯ ಕೊನೆಗೂ ಬಯಲಾಗಿದೆ.ಇದನ್ನೂ ಓದಿ: ಬೆಂಗಳೂರು | ಬಿಎಂಟಿಸಿ ಚಾಲಕನ ಮೇಲೆ ಬೈಕ್ ಸವಾರನಿಂದ ಹಲ್ಲೆ
ಕೈಗಾ ಹಾಗೂ ನೌಕಾದಳ ಇರುವ ಭೀತಿಯಿಂದ ಪೊಲೀಸರು ಹಾಗೂ ಗುಪ್ತಚರ ಇಲಾಖೆಯವರು ಇದರ ಬಗ್ಗೆ ಮಾಹಿತಿ ಕಲೆಹಾಕಲು ಹದ್ದು ಇದ್ದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದರು. ಇನ್ನು ತಾವು ತಂದ ಕ್ಯಾಮೆರಾ ಮೂಲಕ ಝೂಮ್ ಮಾಡಿದಾಗ ಟ್ರಾನ್ಸ್ಮೀಟರ್ ಮೇಲೆ Mahaforest.gov.in ಎಂದು ಬರೆದಿದ್ದು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಹೆಸರು ಸಿಕ್ಕಿದೆ.
ಸಂಶೋಧನೆ ಉದ್ದೇಶದಿಂದ ಬಳಸಲಾದ ರಣಹದ್ದು ಇದಾಗಿದ್ದು, ತಾಡೋಬಾ-ಅಂಧೇರಿ ಟೈಗರ್ ರಿಸರ್ವ್ನಿಂದ ಈ ಹದ್ದನ್ನು ಹಾರಿಸಲಾಗಿದೆ. ರಣಹದ್ದು ಜೀವನದ ಬಗ್ಗೆ ಅಧ್ಯಯನ ಉದ್ದೇಶದಿಂದ ಟ್ರ್ಯಾಕರ್ ಟ್ರಾನ್ಸ್ಮೀಟರ್ ಇಟ್ಟು ಹಾರಿಸಲಾಗಿತ್ತು. ಸದ್ಯ ರಣಹದ್ದಿಗೆ ಅರಣ್ಯ ಇಲಾಖೆ ಆಹಾರ ನೀಡಲು ಮುಂದಾಗಿದ್ದು, ಸುರಕ್ಷಿತವಾಗಿದೆ.
ಈ ಹಿಂದೆ ಕದಂಬ ನೌಕಾನೆಲೆಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಮಿಕರನ್ನು ಬಳಸಿ ಶತ್ರು ರಾಷ್ಟ್ರವು ಕದಂಬ ನೌಕಾನೆಲೆಯ 2ನೇ ಹಂತದ ಕಾಮಗಾರಿ ಹಾಗೂ ಯುದ್ಧ ಹಡಗುಗಳ ಬಗ್ಗೆ ಮಾಹಿತಿ ಪಡೆದಿದ್ದರು. ಈ ಪ್ರಕರಣ ಸಂಬಂಧ 5 ಜನರನ್ನು ಬಂಧಿಸಲಾಗಿತ್ತು. ನಂತರ ರಾತ್ರಿ ನಿಷೇಧಿತ ನೌಕಾನೆಲೆಯ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಹಾರಿಸಿದ್ದು, ಇದರ ಬೆನ್ನಲ್ಲೇ ಟ್ರ್ಯಾಕರ್ ಅಳವಡಿಸಿದ ಹದ್ದು ಹಾರಾಟ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.ಇದನ್ನೂ ಓದಿ: ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ